ಶಿವಮೊಗ್ಗ: ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾಂಗ್ರೆಸ್ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಕನ್ನಡ ಸಾಹಿತಿಗಳಿಗೆ ಆದ ಅಪಮಾನವನ್ನು ವಿರೋಧಿಸಿ ಕಾಂಗ್ರೆಸ್ ತೀರ್ಥಹಳ್ಳಿ ತಾಲೂಕಿನ ಕವಿಶೈಲದಿಂದ ಪಾದಯಾತ್ರೆ ಪ್ರಾರಂಭಿಸಿದೆ. ಇದರ ನೇತೃತ್ವವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಹಿಸಿದ್ದು, ಹಂಸಲೇಖ ಸಹ ಸಾಥ್ ಕೊಟ್ಟಿದ್ದಾರೆ. ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಪ್ಪಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ. ಅಂದು ಗೋಕಾಕ್ ಚಳುವಳಿ ನಡೆದಿತ್ತು. ಇಂದು ಕುಪ್ಪಳಿ ಕಹಳೆ ಆರಂಭವಾಗಿದೆ ಎಂದರು.
ಇದು ನಾಡಿನಾದ್ಯಂತ ಮೊಳಗಬೇಕು. ಕುವೆಂಪು ಅಂದ್ರೆ ಕನ್ನಡ, ಬಸವ ಅಂದ್ರೆ ಕರ್ನಾಟಕ. ಇವರಿಬ್ಬರಿಗೂ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು. ನಮ್ಮದು ನಾಡಗೀತೆ ಅಲ್ಲ, ನಾಡೇ ಒಂದು ಗೀತೆ. ನಾಡೇ ನಮಗೆ ಒಂದು ಧ್ವಜ. ಇವೆರಡಕ್ಕೂ ಅವಮಾನವಾಗಿದೆ. ಕನ್ನಡದ ನಡ ಮುರಿಯುವ ನಡೆ ರಾಜ್ಯದಲ್ಲಿ ಆರಂಭವಾಗಿದೆ. ಇದರ ವಿರುದ್ಧದ ಹೋರಾಟಗಳು ನಿರಂತರ ನಡೆಯಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ
ಕನ್ನಡಕ್ಕೆ ಮಹಾಮನೆ ಕಲ್ಯಾಣ, ಗುರುಮನೆ ಕವಿಶೈಲ. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು. ತಮಿಳಿಗರ ರೀತಿ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ. ನಾವು ಭಾಷಾಂಧರು ಅಂದ್ರೂ ಸರಿ, ಅವರನ್ನು ನಾವು ಅನುಸರಿಸಬೇಕು. ಅಲ್ಲಿ ಭಾಷೆಗೆ ಧಕ್ಕೆಯಾದರೆ ಆಳುವವರು, ವಿಪಕ್ಷದವರು ಎಲ್ಲರೂ ಒಟ್ಟಾಗಿ ಸೇರುತ್ತಾರೆ ಎಂದರು.