– ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ
ಅಹಮದಾಬಾದ್: ಹಿಂದೂ ಹುಡುಗಿಯರ ತಂಟೆಗೆ ಬಂದ್ರೆ ಸುಮ್ನಿರಲ್ಲ. ಹಾಗೆಯೇ ಗೋ ಹತ್ಯೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಗುಡುಗಿದ್ದಾರೆ.
ಅಹಮದಾಬಾದ್ ನ ವೈಷ್ಣೋದೇವಿ ವೃತ್ತದ ಬಳಿ ಮಾಲಧಾರಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಹುಡುಗಿಯರನ್ನು ಪುಲಾಯಿಸಿ ಅವರನ್ನು ಕರೆದುಕೊಂಡು ಪರಾರಿ ಆಗುವವರನ್ನು ಸುಮ್ಮನೆ ಬಿಡಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಗೋಹತ್ಯೆ ಮಾಡುವವರ ವಿರುದ್ಧವೂ ಗುಡುಗಿರುವ ಸಿಎಂ, ಗೋ ಹತ್ಯೆ ಮಾಡುವವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ವಾರ್ನ್ ಮಾಡಿದ್ದಾರೆ. ನಮ್ಮ ಸರ್ಕಾರವು ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದೆ. ಗೋವು ವಧೆಯನ್ನು ತಡೆಯುವುದರಿಂದ ಹಿಡಿದು, ಸರಗಳ್ಳತನ ನಿಯಂತ್ರಣದವರೆಗೆ ಹಲವು ಕಾನೂನು ಅನುಷ್ಠಾನಕ್ಕೆ ಬಂದಿದೆ. ಇದನ್ನೂ ಓದಿ: ನಟ ಸಾಯಿಧರ್ಮ ತೇಜ್ ಆರೋಗ್ಯ ಸ್ಥಿರ
ಅಂತೆಯೇ ಲವ್ ಜಿಹಾದ್ ವಿರುದ್ಧ ಕೂಡ ಕಠಿಣ ನಿಯಮವನ್ನು ಸರ್ಕಾರ ತಂದಿದೆ. ಲವ್ ಜಿಹಾದ್ ನಿಲ್ಲಿಸಲು ಕಾನೂನು ತಂದಿದ್ದು, ಹಿಂದೂ ಹುಡುಗಿಯನ್ನು ಬಲೆಗೆ ಬೀಳಿಸುವ ಹಾಗೂ ಅವರೊಂದಿಗೆ ಓಡಿಹೋಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ.