ಬೆಂಗಳೂರು: ಪ್ರಗತಿಪರರ ಹತ್ಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿದ್ದರು ಸಹ ಅವರ ಮೌನದಲ್ಲಿ ಒಳಸಂಚಿರಲಿಲ್ಲ. ಈಗಿರುವ ಪ್ರಧಾನಿ ನರೇಂದ್ರ ಮೋದಿಯವರು ಸಹ ಈ ಕುರಿತು ಮೌನವಹಿಸಿದ್ದಾರೆ. ಆದರೆ ಅವರ ಮೌನದಲ್ಲಿ ರಾಕ್ಷಸ ಅಡಗಿದ್ದಾನೆ ಎಂದು ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗೌರಿ ಲಂಕೇಶ್ ಸ್ಮರಣಾರ್ಥ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಗತಿಪರರ ಬಾಯಿ ಮುಚ್ಚಿಸಲು ಬೇಕಂತಲೇ ಕೇಸುಗಳನ್ನು ಹಾಕಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೊಲೆಗಳನ್ನು ಮಾಡಬಾರದು ಅಂತಾ ಹೇಳಿಕೆಗಳನ್ನು ನೀಡುತ್ತಾರೆ. ಅವರ ಹೇಳಿಕೆಗಳು ಯಾವ ರೀತಿ ಇರುತ್ತವೆ ಅಂದರೆ ಸಿನಿಮಾದಲ್ಲಿ ಸಿಗರೇಟ್ ಸೇದುವ ದೃಶ್ಯಾವಳಿಗಳಲ್ಲಿ ಬರೆದಿರುವ `ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎನ್ನುವ ರೀತಿಯಲ್ಲಿ ಇರುತ್ತವೆ. ಅಲ್ಲದೇ ಕೆಲವು ಹಿಂದೂ ಸಂಘಟನೆಗಳು ಹಿಂದೂಗಳನ್ನು ಕುರಿಗಳನ್ನಾಗಿ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.
ಈ ಮೊದಲು ಪ್ರಗತಿಪರರ ಹತ್ಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿದ್ದರು, ಸಹ ಅವರ ಮೌನದಲ್ಲಿ ಒಳಸಂಚಿರಲಿಲ್ಲ. ಆದರೆ ಈಗಿರುವ ಪ್ರಧಾನಿಯವರು ಸಹ ಮೌನವಹಿಸಿದ್ದಾರೆ. ಆದರೆ ಅವರ ಮೌನದಲ್ಲಿ ರಾಕ್ಷಸ ಅಡಗಿದ್ದಾನೆ. ಹೀಗಾಗಿ ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರೋಣ. ಮೈಮರೆಯುವುದು ಬೇಡ. ಅಲ್ಲದೇ ಇವುಗಳನ್ನು ನಾವುಗಳು ಜನಸಾಮಾನ್ಯರಿಗೆ ತೋರಿಸಬೇಕಾಗಿದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಗೌರಿ ಲಂಕೇಶ್ ಕುರಿತು ಮಾತನಾಡಿದ ಅವರು, ಗೌರಿ ನಮ್ಮನ್ನ ಬಿಟ್ಟು ಒಂದು ವರ್ಷ ಆಗಿ ಹೋಗಿದೆ. ಇದರಿಂದಾಗಿ ಸಾಕಷ್ಟು ಧ್ವನಿಗಳು ಹುಟ್ಟಿಕೊಂಡಿವೆ. ಸಾಕಷ್ಟು ನೋವು, ತುಡಿತಗಳನ್ನು ನಾವು ಅನುಭವಿಸಿದ್ದೇವೆ. ಈ ಬಗ್ಗೆ ಒಂದು ವರ್ಷ ಬಹಳ ಮಾತುಕತೆ ನಡೆಸಿದ್ದೇವೆ. ನಾವು ಇದನ್ನು ಬೇರೆ ಥರ ತನಿಖೆಗೆ ತೆಗೆದುಕೊಂಡು ಹೋಗಬೇಕಾಗಿದೆ. ನಾವು ನಮ್ಮ ನೋವನ್ನು ಮರೆತು, ಗೌರಿಯನ್ನು ಮರೆತು ಮಾತನಾಡಬೇಕಾಗಿದೆ. ಗೌರಿ ಒಂದು ಮುಗಿಯದ ಕಥೆಯಾಗಿದ್ದಾಳೆ. ತಾನು ಬಲಿಯಾಗುವ ಮೂಲಕ ಹಲವಾರು ಅನ್ಯಾಯಗಳನ್ನು ಹೊರಕ್ಕೆ ತಂದಿದ್ದಾಳೆ. ಕಲ್ಬುರ್ಗಿ, ಪನ್ಸಾರೆಯವರನ್ನು ಕೊಂದವರು ಬಯಲಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು.
ನಾವು ಈ ಬಗ್ಗೆ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಿಳಿಸಬೇಕಿದೆ. ಇಂದಿನ ದಿನಗಳಲ್ಲಿ ಮನುಷ್ಯ ಜನ್ಮವನ್ನು ಮಾತ್ರವಲ್ಲದೇ ಹಿಂದೂ ಧರ್ಮವನ್ನು ಕಾಪಾಡಬೇಕಿದೆ. ದಾಬೋಲ್ಕರ್, ಕಲ್ಬುರ್ಗಿ ಹಾಗೂ ಪನ್ಸಾರೆಯವರ ಸಾವು ನಮಗೆ ನೋವು ಮಾಡುತ್ತಿದೆ. ಅದು ಸಾವಲ್ಲ ಅದೊಂದು ಕೊಲೆ. ಇದರ ವಿರುದ್ಧ ನಾವು ಹೋರಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರಿ ಹತ್ಯೆಯ ಬಳಿಕ ಸ್ಥಗಿತವಾಗಿದ್ದ ಗೌರಿ ಲಂಕೇಶ್ ಪತ್ರಿಕೆಯನ್ನು `ನ್ಯಾಯಪತ’ ಹೆಸರಿನಲ್ಲಿ ಪುನರ್ ಚಾಲನೆ ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv