ಮೈಸೂರು: ವಿಘ್ನ ನಿವಾರಕ ಗಣಪತಿ ಪಾರ್ವತಿ ದೇವಿಯ ಮಗನೇ ಅಲ್ಲ. ಗಣಪತಿ ಶಿವನ ಮೊದಲನೇ ಪತ್ನಿ ದಾಕ್ಷಾಯಿಣಿಯ ಮಗ ಎಂದು ನಿಡುಮಾಮಿಡಿ ಮಠದ ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.
ಇಂದು ಮೈಸೂರಿನ ಪುರಭವನದಲ್ಲಿ ಮೂಲ ಸಂಸ್ಕೃತಿ ಗಳ ಸಂಘಟನೆಗಳಿಂದ ಬಲಿಚಕ್ರವರ್ತಿ ಸ್ಮರಣೋತ್ಸವ ನಡೆಯಿತು. ಈ ವೇಳೆ ಮಾತನಾಡಿದ ಅವರು, ಆರ್ಯ ಮತ್ತು ದ್ರಾವಿಡರ ನಡುವಿನ ಸಂಘರ್ಷ ತಪ್ಪಿಸಲು ಶಿವ ಆರ್ಯರ ರಾಜ ದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿಯನ್ನು ಮದುವೆ ಆಗಿದ್ದ. ಆ ದಂಪತಿಗಳ ಮಗನೇ ಗಣಪತಿ ಅಂತ ಹೇಳಿದ್ರು.
ವೈದಿಕರು ಇದನ್ನೆಲ್ಲಾ ತಮ್ಮ ಮನಸ್ಸಿಗೆ ಬಂದಂತೆ ತಿರುಚಿದ್ದಾರೆ. ಶಿವ ಅವೈದಿಕ ಸಂಸ್ಕೃತಿಯ ಮೂಲ ನಾಯಕ. ರಾವಣ, ಮಹಿಷಾಸುರ, ಬಲಿಚಕ್ರವರ್ತಿ ದುಷ್ಟರಲ್ಲ. ಖಳನಾಯಕರಲ್ಲ. ಅವರು ಮಹಾನುಭಾವರು. ವೈದಿಕ ಸಂಸ್ಕೃತಿಗೆ ಅವರು ವಿರುದ್ಧ ಇದ್ದರು ಎಂದು ಅವರಿಗೆ ರಾಕ್ಷಸ ಪಟ್ಟ ಕಟ್ಟಲಾಗಿದೆ ಎಂದು ವೈದಿಕ ಸಂಸ್ಕೃತಿ ವಿರುದ್ಧ ಹರಿಹಾಯ್ದರು.
ಇದೇ ವೇಳೆ ಶಿವನ ಭಕ್ತರೆಲ್ಲಾ ಹಿಂದೂಗಳು ಎಂಬ ಪೇಜಾವರ ಸ್ವಾಮೀಜಿ ಹೇಳಿಕೆಗೆ ನಿಡುಮಾಮಿಡಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದು, ಶಿವಭಕ್ತರೆಲ್ಲಾ ಹಿಂದೂಗಳು. ಅವರೆಲ್ಲಾ ಅವೈದಿಕರು. ಶಿವಭಕ್ತರಲ್ಲಿ 18 ಪಂಥ ಇವೆ. ಇದರಲ್ಲಿ ಒಂದೆರೆಡು ಪಂಥ ಹಿಂದೂಗಳು. ಉಳಿದ ಎಲ್ಲರು ಅವೈದಿಕರು. ಅವರು ಹಿಂದೂಗಳಲ್ಲ ಎಂದು ಪ್ರತಿಪಾದಿಸಿದರು.