ಗದಗ: ಜಿಲ್ಲೆಯಲ್ಲಿ ಅನಾರೊಗ್ಯಕ್ಕೆ ತುತ್ತಾಗಿ ನಿತ್ಯವೂ ಕುರಿಗಳ ಮಾರಣಹೋಮ ನಡೆಯುತ್ತಿದ್ದರೂ ಪಶು ವೈದ್ಯಾಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅದೇ ರೀತಿ ಗದಗ ಜಿಲ್ಲೆ ಕಳಸಾಪುರ ಗ್ರಾಮದ ಈರಪ್ಪ ಕನ್ಯಾಳ ಎಂಬ ರೈತನಿಗೆ ಸೇರಿದ 50ಕ್ಕೂ ಅಧಿಕ ಕುರಿಗಳು ಏಕಾಏಕಿ ಸಾವನ್ನಪ್ಪಿವೆ. ಎರಡು ದಿನಗಳಾದರೂ ಪಶುವೈದ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡದೆ ಇರುವುದಕ್ಕೆ ಸಾವನ್ನಪ್ಪಿವೆ ಎಂಬದು ನೊಂದ ರೈತರ ಆರೋಪವಾಗಿದೆ.
ತಡವಾಗಿ ಬಂದ ಮುಖ್ಯ ಪಶುವೈದ್ಯಾಧಿಕಾರಿ ಎಸ್.ಎಸ್.ಹೊಸಮಠ ಹಾಗೂ ಸಹಾಯಕಿ ಜಯಮ್ಮಾ ಅವರನ್ನು ರೈತರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಮುಖದಲ್ಲಿ ಬೆವರಿಳಿಸುವ ಮೂಲಕ, ಈಗ್ಯಾಕೆ ಬಂದ್ರಿ, ನಮಗೂ ಸ್ವಲ್ಪ ವಿಷಕೊಡಿ. ನಾವು ಕುರಿಗಳು ಸತ್ತ ಹಾಗೆ ಸಾಯುತ್ತೇವೆ ಎಂದು ಈರಪ್ಪನ ಕುಟುಂಬದವರು ಕಣ್ಣೀರಿಟ್ಟರು. ಕುರಿಗಳನ್ನು ಕಳೆದುಕೊಂಡ ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಹಲವಾರು ದಿನಗಳಿಂದ ಕುರಿಗಳು ಸಾವನ್ನಪ್ಪುತ್ತಿದ್ದರೂ ಕಾಯಿಲೆಗೆ ಸೂಕ್ತ ಔಷಧ ದೊರೆಯುತ್ತಿಲ್ಲ. ಕುರಿಗಳು ಕಣ್ಣು ಮುಂದೆಯೇ ಸಾಯುತ್ತಿರುವುದನ್ನು ನೋಡಲಾಗದೇ ಕಣ್ಣೀರಿಡುತ್ತಿದ್ದಾರೆ. ಎಲ್ಲಂದರಲ್ಲಿ ನಿತ್ಯವೂ ಕುರಿಗಳು ಸಾವನ್ನಪ್ಪುತ್ತಿವೆ. ಪಶುವೈದ್ಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬರುತ್ತಿಲ್ಲ, ಕುರಿಗಾಹಿಗಳ ಸಮಸ್ಯ ಆಲಿಸುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಈ ಬಗ್ಗೆ ವೈದ್ಯಾಧಿಕಾರಿ ಕೇಳಿದರೆ, ನಮಗೆ ತಿಳಿಸದೇ ಕುರಿಗಳಿಗೆ ಅತಿಯಾದ ಉಪ್ಪು ನೀರು ಕುಡಿಸಲಾಗಿದೆ. ಹೀಗಾಗಿ ಕುರಿಗಳು ಸಾವನ್ನಪ್ಪಿವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದು ರೈತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು. ಪಶುವೈದ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ಸೂಕ್ತ ಔಷಧ ದೊರೆಯದಿರುವುದಕ್ಕೆ ಬೇಸತ್ತ ರೈತರು ಮೃತ ಕುರಿಗಳನ್ನು ಟ್ರ್ಯಾಕ್ಟರ್ ಮೂಲಕ ತೆಗೆದುಕೊಂಡು ಗದಗ ಜಿಲ್ಲಾಡಳಿತ ಭವನದ ಬಳಿಬಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿ ಕಚೇರಿ ಬಳಿ ಕುರಿಗಳನ್ನು ಹಾಕಿ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ರೈತರಿಗೆ ಸಮಾಧಾನ ಪಡಿಸಿ ಸಾಂತ್ವಾನ ಹೇಳಿದರು. ಜಿಲ್ಲೆಯಲ್ಲಿ ಪಶುವೈದಾಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯ ಬಗೆರಿಸುತ್ತೇನೆ ಹಾಗೂ ನಿಮಗೆ ಸೂಕ್ತ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.