ವಿಜಯ್‌ ಜನಪ್ರಿಯತೆ ವೋಟ್‌ ಆಗಿ ಪರಿವರ್ತನೆ ಆಗುತ್ತೆ ಅಂದುಕೊಂಡಿರಲಿಲ್ಲ: ಪರಮೇಶ್ವರ್‌

Public TV
2 Min Read

– ತಮಿಳುನಾಡಿನ ಜನ ಕಾಂಗ್ರೆಸ್‌ನ್ನು 3ನೇ ಆಯ್ಕೆ ಮಾಡಿಕೊಂಡಿದ್ರೆ ಅನುಕೂಲವಾಗ್ತಿತ್ತು

ಬೆಂಗಳೂರು: ತಮಿಳುನಾಡಿನಲ್ಲಿ (Tamil Nadu) ವಿಜಯ್‌ ಜನಪ್ರಿಯತೆ ಇಷ್ಟುಬೇಗ ವೋಟ್‌ ಆಗಿ ಪರಿವರ್ತನೆ ಆಗುತ್ತೆ ಅಂತ ನಾವು ಅಂದುಕೊಂಡಿರಲಿಲ್ಲ, ನಿರೀಕ್ಷೆಯೂ ಮಾಡಿರಲಿಲ್ಲ ಎಂದು ಗೃಹಸಚಿವ ಪರಮೇಶ್ವರ್‌ (G Parameshwar) ಅಚ್ಚರಿ ವ್ಯಕ್ತಪಡಿಸಿದ್ರು.

ತಮಿಳುನಾಡು ಚುನಾವಣಾ ಫಲಿತಾಂಶ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಷ್ಟು ಬೇಗ ವಿಜಯ್ (Thalapathy vijay) ಜನಪ್ರಿಯತೆ ವೋಟ್‌ ಆಗಿ ಪರಿವರ್ತನೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಎಲ್ಲಾ ವಿಶ್ಲೇಷಣೆಯಲ್ಲಿ ಇಷ್ಟು ಪರಿಣಾಮವಾಗುತ್ತೆ ಅಂತ ಊಹೆಯೂ ಮಾಡಿಲಿಲ್ಲ. ಜನ ತೀರ್ಮಾನ ಮಾಡಿದ್ದಾರೆ, ಯುವಕರು ಸಹಕಾರ ನೀಡಿದ್ದಾರೆ. ಇದೊಂದು ಹೊಸ ಬದಲಾವಣೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಒಡೆದು ಹೋಳಾಗುತ್ತಾ ಅಣ್ಣಾಡಿಎಂಕೆ – ವಿಜಯ್‌ ಬೆಂಬಲಿಸಲು 30ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆಯುವ ಎಚ್ಚರಿಕೆ! 

ತಮಿಳುನಾಡಿನಲ್ಲಿ ದ್ರಾವಿಡಿಯನ್ ಪಾರ್ಟಿಗಳು ಆಡಳಿತ ಮಾಡ್ತಾ ಇದ್ದರು. ಡಿಎಂಕೆ ತಪ್ಪಿದ್ರೆ ಎಐಡಿಎಂಕೆ ಅಧಿಕಾರ ಮಾಡ್ತಾ ಇದ್ದರು. ಜನ 3ನೇ ಆಯ್ಕೆ ಹುಡುಕುತ್ತಿದ್ದರು. ಕಾಂಗ್ರೆಸ್ ಪಕ್ಷವನ್ನ (Congress Party) ಮೂರನೇ ಆಯ್ಕೆ ಆಗಿ ಮಾಡಿಕೊಳ್ಳೋಕೆ ಆಗಲಿಲ್ಲ, ಮಾಡಿಕೊಂಡಿದ್ದರೆ ನಮಗೂ ಅನುಕೂಲ ಆಗುತ್ತಿತ್ತೋ ಏನೋ ಗೊತ್ತಿಲ್ಲ. ಆದರೆ ನಾವು ಮಾಡಲು ಆಗಲಿಲ್ಲ. ಪರ್ಯಾಯ ಪಕ್ಷಕ್ಕೆ ಜನ ಕಾಯ್ತಾ ಇದ್ದರು. ಅದಕ್ಕೆ ವಿಜಯ್ ಜನಪ್ರಿಯತೆ, ಯುವ ಸಮುದಾಯ ಹೊಸ ಬದಲಾವಣೆ ನೋಡ್ತಿತ್ತು, ಇದೆಲ್ಲವೂ ಸೇರಿ ಆ ರೀತಿ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ಇನ್ನೂ ಟಿವಿಕೆ ಜೊತೆ ಮೈತ್ರಿಗೆ ಹೋಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್‌ನವರು ಯಾವ ದೃಷ್ಟಿಯಿಂದ ಆ ತೀರ್ಮಾನ ಮಾಡಿದ್ದಾರೆ ನೋಡಬೇಕು. ಡಿಎಂಕೆ ಜೊತೆ ಬಹಳ ದಿನದಿಂದ ನಮ್ಮ ಪಕ್ಷ ಜೊತೆಯಲ್ಲಿದೆ. ಹಳೆಯ ಹೊಂದಾಣಿಕೆ ಅಂತ ಮುಂದುವರೆಸಿದ್ದಾರೆ. ಬದಲಾವಣೆ ಮಾಡಬೇಕು ಅನ್ನಿಸಿದ್ರೆ, ರಾಹುಲ್, ಸೋನಿಯಾ, ಕೆ.ಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ಮಾಡಬಹುದಿತ್ತು. ಆದ್ರೆ ಹಳೆಯ ಹೊಂದಾಣಿಕೆ ಅಂತ ಮೈತ್ರಿ ಮುಂದುವರಿಸಿದ್ದಾರೆ ಎಂದು ವಿವರಿಸಿದ್ರು. ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರ ರಚಿಸಲು ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ: ಕೆ.ಸಿ.ವೇಣುಗೋಪಾಲ್

ಇನ್ನೂ ಕೇರಳದಲ್ಲಿ ಸಿಎಂ ಆಯ್ಕೆ ಗೊಂದಲ ವಿಚಾರ ಕುರಿತು ಮಾತನಾಡಿ, ಒಂದು ಸರ್ಕಾರ ಬಂದಾಗ 2-3 ಆಕಾಂಕ್ಷಿಗಳು ಇದ್ದಾಗ ಆಯ್ಕೆ ಮಾಡೋಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದೊಂದು ಪ್ರೊಸೀಸರ್ 3-4 ಜನ ಇದ್ದಾರೆ. ಇಷ್ಟು ಜನ ಇದ್ದಾಗ ಹೈಕಮಾಂಡ್ ಗೆ ತೀರ್ಮಾನ ಮಾಡೋದು ಕಷ್ಟ ಆಗುತ್ತದೆ, ಎಲ್ಲಾ ರೀತಿಯಲ್ಲೂ ನೋಡಿಕೊಂಡು ಉತ್ತಮ ಅಭ್ಯರ್ಥಿಯನ್ನ ಹೈಕಮಾಂಡ್‌ ಆಯ್ಕೆ ಮಾಡುತ್ತದೆ ಎಂದರು.

Share This Article