ಮೈಸೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರು ಜೆಡಿಎಸ್ ಪಕ್ಷವನ್ನು ಕೋತಿಗಳಿಗೆ ಹೋಲಿಕೆ ಮಾಡಿದ್ದಾರೆ.
ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಪರಮೇಶ್ವರ್, ಜೆಡಿಎಸ್ನವರು ಕೋತಿಯಂತೆ. ಒಂದು ಕಡೆ ಇರೋದೇ ಇಲ್ಲ. ಮರದಿಂದ ಮರಕ್ಕೆ ಕೋತಿಗಳ ರೀತಿ ಜಿಗಿಯುತ್ತಲೇ ಇರುತ್ತಾರೆ. ಇದೆಲ್ಲ ನಮ್ಮೂರಿನ ಕಡೆ ಮಾಮೂಲಿ. ಅದೇ ರೀತಿ ಜೆಡಿಎಸ್ನವರ ಕತೆಯಾಗಿದೆ. ಬೆಳಗ್ಗೆ ಒಂದು, ಸಂಜೆ ಒಂದು ಮಾತು. ಇಂತಹ ಜೆಡಿಎಸ್ನವರನ್ನು ಕಟ್ಟಿಕೊಂಡು ನಾವೆಲ್ಲೋಗಿ ಸಾಯೋಣ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೆ ನಮ್ಮ ಜೊತೆ ಇರಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಜೆಡಿಎಸ್ನವರು ಇರಲ್ಲ. ಅವರ ಜೊತೆಗಾದರೂ ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೂ ಕೇಳಲ್ಲ. ಇಂತವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಬಿಜೆಪಿ ಜೊತೆ ಜೆಡಿಎಸ್ನವರನ್ನು ತಿರಸ್ಕರಿಸಿ ಎಂದು ಪರಮೇಶ್ವರ್ ಕರೆ ನೀಡಿದರು.
ಇದೇ ವೇಳೆ ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ. ಇದನ್ನು ನಾನು ನಿಮಗೆ ಬರೆದು ಕೊಡುತ್ತೇನೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.