ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಿಂದ (Male Mahadeshwara Hills) ನಾಗಮಲೆಗೆ ಪಾದಯಾತ್ರೆ ಹೋಗುತ್ತಿದ್ದ ಬಾಲಕನನ್ನು ಬಲಿ ಪಡೆದ ಚಿರತೆ (Leopard) ಸೆರೆಗೆ ಅರಣ್ಯ ಇಲಾಖೆ (Forest Department) ಪಣ ತೊಟ್ಟಿದೆ. ಚಿರತೆ ಸೆರೆಗೆ ಥರ್ಮಲ್ ಡ್ರೋನ್ ಟೀಂ ಸ್ಥಳದಲ್ಲೇ ಬೀಡುಬಿಟ್ಟಿದೆ.
ಬೆಂಗಳೂರು ಮೂಲದ ಹರ್ಷಿತ್ ಎಂಬ ಬಾಲಕನನ್ನು ಚಿರತೆ ಬಲಿ ಪಡೆದಿತ್ತು. ಮಗುವನ್ನು ಕೊಂದ ಚಿರತೆಯನ್ನು ಸೆರೆಹಿಡಿಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನಲೆ ಅರಣ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಸಲಹೆ ಸೂಚನೆ ಪಡೆದು ನರಹಂತಕ ಚಿರತೆಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಬಾಲಕನನ್ನು ಕೊಂದಿದ್ದ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ಬೋನ್ಗಳನ್ನು ಕೂಡ ಅಳವಡಿಸಿದ್ದಾರೆ. ಒಂದು ವೇಳೆ ಆ ಚಿರತೆ ಬೋನಿಗೆ ಬೀಳದಿದ್ದರೆ ಮುಂದೆ ಯಾವ ಮಾರ್ಗ ಅನುಸರಿಸಬೇಕು ಎಂಬ ಬಗ್ಗೆ ಚರ್ಚೆ ಕೂಡ ನಡೆಸಿದ್ದಾರೆ. ಇದನ್ನೂ ಓದಿ: ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ 20 ಲಕ್ಷ ಪರಿಹಾರ
ಚಿರತೆ ಸೆರೆಗಾಗಿ ವಿಶೇಷ ಕಾರ್ಯಪಡೆ ಕೂಡ ರಚಿಸಲಾಗಿದೆ. ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮ ಸಿಬ್ಬಂದಿ ಈ ಚಿರತೆ ಆಪರೇಷನ್ನಲ್ಲಿ ಭಾಗಿಯಾಗಿದ್ದಾರೆ. ಒಟ್ಟಾರೆ 70ಕ್ಕೂ ಹೆಚ್ಚು ಸಿಬ್ಬಂದಿ ಆ ಚಿರತೆ ಹಿಂದೆ ಬಿದ್ದಿದ್ದಾರೆ. ಅಲ್ಲದೇ ಥರ್ಮಲ್ ಡ್ರೋನ್ನನ್ನು ಕೂಡ ಚಿರತೆ ಪತ್ತೆಗೆ ಬಳಸುತ್ತಿದ್ದಾರೆ. ಚಿರತೆಯ ಚಲನವಲನದ ಮೇಲೆ ನಿಗಾ ಇಡಲೂ ಉಪಯೋಗಿಸುತ್ತಿದ್ದಾರೆ. ಇದು ಅರಣ್ಯ ಪ್ರದೇಶವಾದ ಹಿನ್ನಲೆ ಚಿರತೆ ಸೆರೆ ಅಷ್ಟು ಸುಲಭವಲ್ಲ. ಅದಕ್ಕಾಗಿ ಬೇರೆ ಬೇರೆ ಯೋಜನೆಗಳನ್ನು ಕೂಡ ಮಾಡಿಕೊಂಡಿದ್ದಾರೆ. ಪ್ಲ್ಯಾನ್ ಎ ಫೇಲಾದ್ರೆ, ಪ್ಲ್ಯಾನ್ ಬಿ ಅಸ್ತ್ರ ಬಳಸಲು ಚಿಂತನೆ ಮಾಡ್ತಿದ್ದಾರೆ. ಇದನ್ನೂ ಓದಿ: ನಾಗಮಲೆಗೆ ಪಾದಯಾತ್ರೆ ಹೊರಟಿದ್ದ ಬಾಲಕ ಚಿರತೆ ದಾಳಿಗೆ ಬಲಿ
ಒಟ್ಟಲ್ಲಿ ಬಾಲಕನನ್ನು ಬಲಿ ಪಡೆದ ಚಿರತೆ ಸೆರೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ದೊಡ್ಡ ಟಾಸ್ಕ್ ಆಗಿದೆ. ಈ ಟಾಸ್ಕ್ನಲ್ಲಿ ಹೇಗೆ ಯಶಸ್ವಿಯಾಗ್ತಾರೆ ಎಂಬ ಕುತೂಹಲ ಮಾತ್ರ ಎಲ್ಲರಲ್ಲೂ ಮನೆ ಮಾಡಿದೆ. ಇದನ್ನೂ ಓದಿ: ಚಿರತೆ ದಾಳಿಗೆ ಬಾಲಕ ಬಲಿ – ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ

