ಚೆನ್ನೈ: ತಮಿಳುನಾಡಿನ (Tamil Nadu) ಗ್ರಾಮವೊಂದರಲ್ಲಿ ವಿಕೃತವಾಗಿ ಜಾತಿ ತಾರತಮ್ಯ ಮಾಡಲಾದ ಘಟನೆ ಬೆಳಕಿಗೆ ಬಂದಿದೆ. ದಲಿತರಿಗೆಂದು (Dalits) ಮೀಸಲಿಡಲಾಗಿದ್ದ ನೀರಿನ ತೊಟ್ಟಿಗೆ (Water Tank) ಕಿಡಿಗೇಡಿಗಳು ಮಾನವರ ಮಲ ಸುರಿದಿರುವ ಆಘಾತಕಾರಿ ವಿಷಯ ತಿಳಿದುಬಂದಿದೆ.
ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಕುಡಿಯುವ ನೀರನ್ನು ಪೂರೈಸುವ 10,000 ಲೀ. ನೀರಿನ ತೊಟ್ಟಿಯಲ್ಲಿ ಅಪಾರ ಪ್ರಮಾಣದ ಮಾನವನ ಮಲ ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿರುವ ಹಿನ್ನೆಲೆ ಪುದುಕೊಟ್ಟೈ ಡಿಸಿ ಕವಿತಾ ರಾಮು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಂದಿತಾ ಪಾಂಡೆ ಇರಾಯೂರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ವರದಿಗಳ ಪ್ರಕಾರ, ಕೆಲ ದಿನಗಳಿಂದ ಗ್ರಾಮದಲ್ಲಿ ಅನೇಕ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಕುಡಿಯುವ ನೀರಿನಲ್ಲಿ ಸಮಸ್ಯೆಯಿರಬಹುದು ಎಂದು ವೈದ್ಯರು ಸೂಚಿಸಿದ ಬಳಿಕ ಗ್ರಾಮಸ್ಥರು ನೀರಿನ ಟ್ಯಾಂಕ್ ಹತ್ತಿ ಪರಿಶೀಲಿಸಿದ್ದಾರೆ. ಈ ವೇಳೆ ವಿಕೃತ ಕೃತ್ಯ ಬೆಳಕಿಗೆ ಬಂದಿದೆ.
ಕುಡಿಯುವ ನೀರು ಹಳದಿ ಬಣ್ಣಕ್ಕೆ ತಿರುಗುವಷ್ಟು ಅಪಾರ ಪ್ರಮಾಣದ ಮಲವನ್ನು ನೀರಿನ ತೊಟ್ಟಿಗೆ ಸುರಿದಿರುವುದು ಕಂಡುಬಂದಿದೆ. ಇದಾವುದನ್ನೂ ತಿಳಿಯದೇ ಗ್ರಾಮಸ್ಥರು ಕಳೆದ 1 ವಾರದಿಂದ ಈ ನೀರನ್ನು ಸೇವಿಸುತ್ತಿದ್ದರು. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆ ಸತ್ಯ ಬೆಳಕಿಗೆ ಬಂದಿದೆ. ಎಂದು ಗ್ರಾಮದ ರಾಜಕೀಯ ಕಾರ್ಯಕರ್ತ ಮೋಕ್ಷ ಗುಣವಲಗನ್ ಹೇಳಿದ್ದಾರೆ. ಇದನ್ನೂ ಓದಿ: 8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ದೆಹಲಿ ಪೊಲೀಸ್ಗೆ ಭಾರೀ ಮೆಚ್ಚುಗೆ
ಈ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ಸ್ಥಳೀಯ ಚಹಾ ಅಂಗಡಿಯಲ್ಲಿಯ್ಯೂ ಪ್ರತ್ಯೇಕ ಗ್ಲಾಸ್ಗಳ ವ್ಯವಸ್ಥೆ ಇದೆ. ದೇವಸ್ಥಾನದ ಆವರಣದಲ್ಲಿ ಇಂದಿಗೂ ದಲಿತರಿಗೆ ಪ್ರವೇಶವಿಲ್ಲ ಎನ್ನಲಾಗಿದೆ.
ಅನಾರೋಗ್ಯಕ್ಕೀಡಾದ ಮಗುವೊಂದರ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಸೆಕ್ಷನ್ 277, 328 ಅನ್ವಯ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.
ಕೆಲ ದಲಿತರನ್ನು ಡಿಸಿ ಹಾಗೂ ಎಸ್ಪಿ ತಾವಾಗಿಯೇ ದೇವಾಲಯಗಳಿಗೆ ಕರೆದುಕೊಂಡು ಹೋಗಿದ್ದು, ಜಾತಿ ತಾರತಮ್ಯ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೆ ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ