ಉಡುಪಿ: 8 ವರ್ಷದ ಮಗಳನ್ನು ಬಾವಿಗೆ ತಳ್ಳಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ.
ಮಲ್ಪೆಯ ಕೊಡವೂರು ನಿವಾಸಿಯಾದ ಶರತ್ ತಮ್ಮದೇ ಮನೆಯ ಬಾವಿಗೆ ಮಗಳು ಕನ್ನಿಕಾಳನ್ನು ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರತ್ ಮತ್ತು ಕನ್ನಿಕಾ ಮಂಗಳವಾರ ರಾತ್ರಿ 12.30ರ ವೇಳೆಯಲ್ಲಿ ಮನೆಯಿಂದ ಕಾಣಿಯಾಗಿದ್ದರು. ಮನೆಯವರು ಸುತ್ತಮುತ್ತ ಹುಡುಕಾಟ ನಡೆಸಿ ಎಲ್ಲಾದರೂ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು.
ಬುಧವಾರವೂ ಬಾರದೇ ಇದ್ದಾಗ ಮಲ್ಪೆ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರು. ಆದರೆ ಇಂದು ಮನೆಯ ತೋಟದಲ್ಲಿದ್ದ ಬಾವಿಯಲ್ಲಿ ಇಬ್ಬರ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ. ಮಗಳನ್ನು ಬಾವಿಗೆ ತಳ್ಳಿ ನಂತರ ತಂದೆಯೂ ಹಾರಿರುವ ಶಂಕೆ ವ್ಯಕ್ತವಾಗಿದೆ.
ಮುಂಚೆ ಅದೇ ಬಾವಿ ಸೇರಿದಂತೆ ಎಲ್ಲಾ ಕಡೆ ಹುಟುಕಾಟ ನಡೆಸಲಾಗಿತ್ತು. ಆದರೆ ಬಾವಿಗೆ ಹಾರಿರುವ ಬಗ್ಗೆ ಯಾವುದೇ ಕುರುಹುಗಳು ಇರಲಿಲ್ಲ. ಸದ್ಯ ಶವಗಳನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶರತ್ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ವೃತ್ತಿಯನ್ನು ಮಾಡಿಕೊಂಡು ಬಂದಿದ್ದರು. ಮಂಗಳವಾರ ರಾತ್ರಿ ಕುಟುಂಬ ಸಮೇತರಾಗಿ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾರಣಗಳೇ ಇಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಯಾವುದೇ ಜಗಳ-ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ತಂದೆ ಶರತ್ ಮಗಳ ಬಗ್ಗೆ ಬಹಳ ಕಾಳಜಿ ಮಾಡುತ್ತಿದ್ದರು. ಒಂದು ದಿನವೂ ಬಿಟ್ಟು ಇರುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಾಗಾದ್ರೆ ಆತ್ಮಹತ್ಯೆಗೆ ಕಾರಣ ಏನೆಂಬುದು ನಿಗೂಢವಾಗಿಯೇ ಉಳಿದಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.