ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ರಸ್ತೆಯಲ್ಲಿನ ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಗುರುತಿಸಲಾಗಿದ್ದ ವಿವಾದಿತ ಜಾಗದಲ್ಲಿ ಮಂಡ್ಯದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.
ಭಾನುವಾರ ಸಂಜೆ ಮಂಡ್ಯದಿಂದ ಬಂದ ವಿಷ್ಣು ಸೇನಾ ಸಂಘದ ಕಾರ್ಯಕರ್ತರು ವಿವಾದಿತ ಜಾಗದಲ್ಲೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕೂಡ ನೆರವೇರಿಸಿ ಪೂಜೆ ಸಲ್ಲಿಸಿದ್ದಾರೆ.
ಸರ್ಕಾರವು ಹಾಲಾಳು ಗ್ರಾಮದ ಬಳಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡಿತ್ತು. ಆದರೆ ಸ್ಥಳೀಯ ರೈತರು ಈ ಜಾಗ ತಮ್ಮದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಹೀಗಾಗಿ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ತಡೆ ಬಿದ್ದಿತ್ತು. ಈಗ ಇದೇ ಸ್ಥಳಕ್ಕೆ ಬಂದ ಮಂಡ್ಯದ ವಿಷ್ಣುಸೇನಾ ಸಂಘಟನೆ ಕಾರ್ಯಕರ್ತರು ವಿವಾದಿತ ಜಾಗವನ್ನು ಶುಚಿಗೊಳಿಸಿ ಬಾಳೆ ಕಂಬ, ಹೂ, ಇಟ್ಟಿಗೆ ಇಟ್ಟು ತಮ್ಮ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿ ಅಭಿಮಾನ ತೋರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv