ಹಾಸನ: ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಅಮಾನವೀಯ ಘಟನೆ ಹಾಸನ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸುಜಾತಾ ಎಂಬವರೇ ಹಲ್ಲೆಗೊಳಗಾದ ಮಹಿಳೆ. ಜಮೀನು ಕಬಳಿಸುವ ಸಲುವಾಗಿ ಅದೇ ಗ್ರಾಮದ ಮಳಲಿಗೌಡ ಮತ್ತು ಅವನ ಕುಟುಂಬಸ್ಥರು ಸುಜಾತ ಅವರನ್ನು ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಸುಜಾತಾ ಅವರಿಗೆ ಬಂದಿದ್ದ ತಾಯಿಯ ಪಾಲಿನ 3 ಎಕರೆ ಜಮೀನು ಕಬಳಿಸಲು ಮಳಲಿಗೌಡ ಹಲ್ಲೆ ನಡೆಸಿದ್ದಾನೆ.
ಸುಜಾತಾ ಅವರು ಪತಿ ಗಿಡ್ಡೆಗೌಡ ಎಂಬವರೊಂದಿಗೆ ವಾಸವಾಗಿದ್ದು, ತಿಮ್ಮೇನಹಳ್ಳಿಯಲ್ಲಿ ಸುಮಾರು 11 ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿದ್ದರು. ಮುಳುಗಡೆಯಾಗಿದ್ದ ನಮ್ಮ ಆಸ್ತಿಯ ಬದಲಾಗಿ ಸರ್ಕಾರ ನಮಗೆ ಈ ಜಮೀನನ್ನು ನೀಡಿತ್ತು. ಕಳೆದ 11 ವರ್ಷಗಳಿಂದ ಇಲ್ಲಿ ನಾವೇ ಕೃಷಿ ಮಾಡುತ್ತಿದ್ದೇವೆ. ಈ ಜಮೀನಿನ ಮೇಲೆ ಲೋನ್ ಸಹ ತೆಗೆದುಕೊಂಡಿದ್ದೇವೆ. ಆದ್ರೆ ಈ ಜಮೀನು ಪಡೆಯುವ ದುರಾಲೋಚನೆಯಿಂದ ಮಳಲಿಗೌಡ ಮತ್ತು ಅವರ ಮನೆಯವರು ವಿನಾಕಾರಣ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ನನ್ನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ ಎಂದು ಸುಜಾತಾ ಹೇಳಿದ್ದಾರೆ
ಪತ್ನಿಯನ್ನು ಕಟ್ಟಿಹಾಕಿ ಹಲ್ಲೆ ನಡೆಸಿರುವ ವಿಷಯ ತಿಳಿದ ಪತಿ ಗಿಡ್ಡೇ ಗೌಡ ಹಾಸನ ಪೊಲೀಸರೊಂದಿಗೆ ಗ್ರಾಮಕ್ಕೆ ಆಗಮಿಸಿ ಸುಜಾತರನ್ನು ರಕ್ಷಿಸಿದ್ದಾರೆ. ಇನ್ನು ಗಾಯಗೊಂಡ ಸುಜಾತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಳಲೀಗೌಡ, ಮಂಜುನಾಥ್, ಸಿಂಚನ್ ಹಾಗೂ ಆಶಾ ಎಂಬವರ ವಿರುದ್ಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.