ಕೋಲ್ಕತ್ತಾ: ಡ್ರೈವಿಂಗ್ ಕಲಿಯುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಚಾಲನೆಯ ಸಮಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಗಾಡಿಯನ್ನು ಹರಿಸಿದ್ದು, ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸೋಮವಾರ ಕೋಲ್ಕತ್ತಾದ ಗರಿಯಾ ಸಹಕಾರಿ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ ನಡೆದಿದೆ. ಮೃತ ದುರ್ದೈವಿ ಪ್ರೊಫೆಸರ್ ಸುನಿಲ್ ಕುಮಾರ್ ಗರೈ ಮಾರುಕಟ್ಟೆಯಿಂದ ತರಕಾರಿಯನ್ನು ತರಲು ಹೋಗಿದ್ದು, ಮರಳುವಾಗ ದುರ್ಘಟನೆ ನಡೆದಿದೆ.
ವರದಿಗಳ ಪ್ರಕಾರ ಗರೈ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದಾಗ ಹಿಂದಿನಿಂದ ಬಂದ ಕಾರು, ಬೈಕ್ಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ಮೇಲೆ ಕಾರು ಅವರ ಮೇಲೆಯೇ ಹರಿದುಕೊಂಡು ಹೋಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬಿಗ್ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ
ಪ್ರತ್ಯಕ್ಷದರ್ಶಿಗಳ ಪ್ರಕಾರ ಗರೈ ಅವರ ತಲೆ ಎಂಜಿನ್ ಮತ್ತು ಮಡ್ಗಾರ್ಡ್ ನಡುವೆ ಸಿಲುಕಿಕೊಂಡಿತ್ತು. ಸ್ಥಳದಲ್ಲಿ ನೆರೆದಿದ್ದ ಜನರು ಅವರನ್ನು ಅದರಿಂದ ಬಿಡಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಗರೈ ಸಾವನ್ನಪ್ಪಿದ್ದಾರೆ.
ಗರೈಗೆ ಡಿಕ್ಕಿ ಹೊಡೆದ ಕಾರು ಮಧ್ಯಮ ಹಂತದ ಮಾಜಿ ಪೊಲೀಸ್ ಅಧಿಕಾರಿ ಓಡಿಸುತ್ತಿದ್ದು, ಅಪಘಾತದ ಸಮಯದಲ್ಲಿ ಕಾರು ಚಾಲನೆಯನ್ನು ಕಲಿಯುತ್ತಿದ್ದರು ಎನ್ನಲಾಗಿದೆ. ಗರೈ ಅವರ ಬೈಕ್ ಎದುರುಗಡೆ ಇದ್ದುದನ್ನು ಕಂಡು ಗಾಬರಿಗೊಳಗಾದ ಆರೋಪಿ ಗೊಂದಲದಲ್ಲಿ ಬ್ರೇಕ್ ಹಾಕುವ ಬದಲು ಆಕ್ಸಿಲೆಟರ್ ಒತ್ತಿದ್ದು, ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭದ್ರತೆಗಾಗಿ 12 ಕೋಟಿಯ ದುಬಾರಿ ಕಾರು- ವಿಶೇಷತೆ ಏನು..?
ಸದ್ಯ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಿದ್ದಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ.