ಬೆಂಗಳೂರು: ಕೆಂಪೇಗೌಡ ಜಯಂತಿ(Kempegowda Jayanti) ಆಚರಣೆ ವೇಳೆ ನಡೆದ ಅಹಿತಕರ ಘಟನೆಯ ಬೆನ್ನಲ್ಲೇ, ಚಿಕ್ಕಬಳ್ಳಾಪುರ (Chikkaballapura) ಶಾಸಕ ಪ್ರದೀಪ್ ಈಶ್ವರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ತಮಗಾದ ಅವಮಾನವನ್ನು ವಿವರಿಸಿ ಕಣ್ಣೀರು ಹಾಕಿದ್ದಾರೆ.
ನಡೆದ ಗಲಾಟೆಯನ್ನು ಸಿದ್ದರಾಮಯ್ಯ ಅವರಿಗೆ ವಿವರಿಸಿದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೀವ್ರ ಭಾವುಕರಾದರು. ವಿರೋಧ ಪಕ್ಷಗಳಾದ ಜೆಡಿಎಸ್ (JDS) ಮತ್ತು ಬಿಜೆಪಿ (BJP) ಕಾರ್ಯಕರ್ತರು ನನ್ನ ಮೇಲೆ ಚಪ್ಪಲಿ ಎಸೆದಿದ್ದಲ್ಲದೆ, ನನ್ನ ಹಾಗೂ ನನ್ನ ಕುಟುಂಬದವರನ್ನು ಅತ್ಯಂತ ನಿಂದನೀಯ ಪದಗಳಿಂದ ನಿಂದಿಸಿದ್ದಾರೆ ಎಂದು ಹೇಳುತ್ತಾ ಸಿದ್ದರಾಮಯ್ಯ ಅವರ ಎದುರೇ ಕಣ್ಣೀರು ಸುರಿಸಿದರು.
ಶಾಸಕರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಅವರು, ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯ. ಇವೆಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ, ಇಡೀ ಪಕ್ಷ ಮತ್ತು ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ಸಾಂತ್ವನ ಹೇಳಿದರು. ಇದನ್ನೂ ಓದಿ: ಬ್ಯಾಂಕ್ನಲ್ಲಿ 6.62 ಕೋಟಿ ಗೋಲ್ಮಾಲ್ – ಆರೋಪ ಎದುರಿಸ್ತಿದ್ದ ಅಧ್ಯಕ್ಷ 3 ಪುಟಗಳ ಡೆತ್ನೋಟ್, ವಿಡಿಯೋ ಮಾಡಿಟ್ಟು ಆತ್ಮಹತ್ಯೆ
ಪೊಲೀಸರ ಸಮ್ಮುಖದಲ್ಲೇ, ಅದೂ ಆಡಳಿತ ಪಕ್ಷದ ಶಾಸಕರೊಬ್ಬರ ಮೇಲೆ ಈ ರೀತಿಯ ಹಲ್ಲೆ ಮತ್ತು ನಿಂದನೆ ನಡೆದಿರುವುದರ ಬಗ್ಗೆ ಸಿದ್ದರಾಮಯ್ಯ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ತಕ್ಷಣವೇ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ, ಘಟನೆಯ ಬಗ್ಗೆ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸೂಚಿಸಿದರು. ಅಲ್ಲದೆ, ಸ್ಥಳದಲ್ಲಿದ್ದುಕೊಂಡು ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಗೃಹ ಸಚಿವರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಘಟನೆಯ ಕುರಿತು ಸುದೀರ್ಘ ಮಾತುಕತೆ ನಡೆಸಿದರು.
ಇವರೊಂದಿಗೆ ಮಾಜಿ ಸಚಿವರಾದ ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್, ಶಾಸಕರುಗಳಾದ ಶಿವಲಿಂಗೇಗೌಡ, ಯಾಸೀರ್ ಖಾನ್ ಪಠಾಣ್, ಶ್ರೀನಿವಾಸ ಮಾನೆ ಹಾಗೂ ಪಾವಗಡ ವೆಂಕಟೇಶ್ ಅವರೂ ಸಹ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು. ಈ ಎಲ್ಲಾ ಮಹತ್ವದ ಭೇಟಿಗಳ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದರು.
