ಬೆಂಗಳೂರು: ಭಾರತದಲ್ಲಿ 640 ವಿವಿಗಳಿವೆ, 36 ಸಾವಿರ ಡಿಗ್ರಿ ಕಾಲೇಜುಗಳಿವೆ. ಆದರೆ ಇಲ್ಲಿವರೆಗೂ ಒಬ್ಬ ಸಿವಿ ರಾಮನ್ರನ್ನು ಹುಟ್ಟುಹಾಕಲು ಸಾಧ್ಯವಾಗಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ವ್ಯಕ್ತಿಯನ್ನು ಹುಟ್ಟುಹಾಕಿಲ್ಲ ಅಂತಾ ದೇಶದ ವಿಶ್ವವಿದ್ಯಾಲಯಗಳ ಕಾರ್ಯದ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಸಾಕಷ್ಟು ವಿದ್ಯಾರ್ಥಿಗಳು ಬೇರೆ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗ್ತಾರೆ. ನಮ್ಮ ದೇಶದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗ್ತಾ ಇದ್ದಾರೆ ಅಂದ್ರೆ ನಮ್ಮಲ್ಲಿ ಉತ್ತಮ ಶಿಕ್ಷಣ, ಶಿಕ್ಷಕರು ಇಲ್ಲ ಅಂತ ಅಲ್ಲ. ಹೆಚ್ಚಿನ ಜ್ಞಾನಾರ್ಜನೆಗೆ ಹೋಗ್ತಾ ಇರೋದು. ನಮ್ಮಲ್ಲೂ ಸಾಕಷ್ಟು ಉತ್ತಮ ಶಿಕ್ಷಕರು ಇದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿ. ಜ್ಞಾನ ನಮ್ಮ ವ್ಯಕ್ತಿತ್ವ ಅಭಿವೃದ್ಧಿಯ ಭದ್ರ ಬುನಾದಿಯಾಗಿದೆ ಅಂದ್ರು.
ನಮ್ಮ ಭಾರತದ ಐಐಟಿಗಳು ವಿಶ್ವದ ಯಾವುದೇ ಶಿಕ್ಷಣ ಸಂಸ್ಥೆಯೊಂದಿಗೆ ಸ್ಪರ್ಧಿಸುವಷ್ಟು ಗುಣಮಟ್ಟ ಹೊಂದಿವೆ. ಸರ್.ಸಿ.ವಿ.ರಾಮನ್, ಅಮರ್ತ್ಯ ಸೇನ್ ಅವರಂತಹ ನೋಬೆಲ್ ಪ್ರಶಸ್ತಿ ವಿಜೇತರೆಲ್ಲಾ ಅಧ್ಯಯನ ಮಾಡಿದ್ದು ಭಾರತೀಯ ವಿಶ್ವವಿದ್ಯಾಲಯಗಳಲ್ಲೇ. ಆದರೆ ಸ್ವಾತಂತ್ರ್ಯಾನಂತರ ಯಾವುದೇ ವಿವಿಯಿಂದ ನೋಬೆಲ್ ಪಡೆಯಲು ಅರ್ಹರಾದವರು ಬರಲೇ ಇಲ್ಲ. ಈಗ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಂತಹಾ ಗುಣಮಟ್ಟದ ಶಿಕ್ಷಣ ಕೊಡಬೇಕು. ಇಡೀ ವಿಶ್ವದ ವಿದ್ಯಾರ್ಥಿಗಳನ್ನು ಭಾರತೀಯ ವಿವಿಗಳು ಆಕರ್ಷಿಸುವಂತೆ ಆಗಬೇಕು ಅಂತಾ ಹೇಳಿದ್ರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಉನ್ನತ ಶಿಕ್ಷಣಕ್ಕಾಗಿ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರದಿಂದ ಈ ಸ್ಕೂಲ್ ಆರಂಭಿಸಲಾಗುತ್ತದೆ. ಆರ್ಥಿಕ ವಿಷಯಗಳ ಅಧ್ಯಯನ ಮತ್ತು ತರಬೇತಿಯನ್ನು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೀಡಲಿದೆ. ವಿಶ್ವದರ್ಜೆಯ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನ ನೀಡಲಾಗುವುದು. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಕಂಡ ಶಿಕ್ಷಣ ಮತ್ತು ಆರ್ಥಿಕ ಸಮಾನತೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸ್ಕೂಲ್ ಹೆಜ್ಜೆ ಇಡಲಿದೆ ಅಂತಾ ಹೇಳಿದ್ರು.
ಇದೇ ವೇಳೆ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡ ಸಿಎಂ, ಅನ್ನಭಾಗ್ಯ ಯೋಜನೆಯನ್ನು ರಾಷ್ಟ್ರೀಯ ಮಾಧ್ಯಮಗಳು ಇದು ಆರ್ಥಿಕ ಹೊರೆಯ ಯೋಜನೆ ಎಂದು ಹೇಳುತ್ತಿವೆ. ಈ ರೀತಿಯ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಸಿವಿನ ತೀವ್ರತೆ ಗೊತ್ತಾಗದವರಿಗೆ ಇದು ಅರ್ಥವಾಗುವುದಿಲ್ಲ ಅಂದ್ರು.