ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್.ಎಸ್.ನಾಗಶ್ರೀ ಅವರ ನಿರ್ಮಾಣದ, ತಂದೆ ಮಗಳ ಬಾಂಧವ್ಯದ ಕಥಾನಕ ಒಳಗೊಂಡ ಪ್ಯಾರ್ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ. ಎಸ್.ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಿಶ್ವಿನ್, ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ನಟಿಸಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ಈಗಾಗಲೇ ರಿಲೀಸಾಗಿರುವ ‘ಒಂದೇ ಮಾತಲಿ ಹೇಳೋದಾದರೆ’ ಅತಿಹೆಚ್ಚು ವೀಕ್ಷಣೆಯಾಗಿದೆ.
ಪಳನಿ ಡಿ.ಸೇನಾಪತಿ ಅವರ ಸಂಗೀತ, ಕೆಎಸ್.ಚಂದ್ರಶೇಖರ್ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ನಿರ್ದೇಶಕ ಸುಪ್ರೀತ್ ಮಾತನಾಡುತ್ತ ಈ ಹಿಂದೆ ಒಂದೇ ಮಾತಲಿ ಹಾಗೂ ರಾಯಭಾರಿಯಾಗಿ ಎಂಬ 2 ಸಾಂಗ್ ಬಿಟ್ಟಿದ್ದೆವು. ಒಳ್ಳೆ ಪ್ರತಿಕ್ರಿಯೆ ಬಂದಿದೆ, ಈಗ ಟೀಸರ್ ರಿಲೀಸಾಗಿದೆ. ನಿರ್ಮಾಪಕರು ನನ್ನಮೇಲೆ ನಂಬಿಕೆಯಿಟ್ಟು ದೊಡ್ಡಮಟ್ಟದ ಬಂಡವಾಳ ಹಾಕಿದ್ದಾರೆ. ಯಾವುದಕ್ಕೂ ಬೇಡ ಎನ್ನದೆ ಧಾರಾಳವಾಗಿ ಖರ್ಚು ಮಾಡಿದ್ದಾರೆ.
ಪ್ರೀತಿ ಪ್ರೇಮದ ಕಥೆಯ ಜೊತೆಗೆ ತಂದೆ ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ತೆರೆದಿಡುವ ಕಥೆ ಚಿತ್ರದಲ್ಲಿದೆ. ಆ ಪ್ರೀತಿ ಯಾವ ಮಟ್ಟಕ್ಕೆ ತಗೊಂಡು ಹೋಗಬಹುದು, ತಂದೆಗೋಸ್ಕರ ಮಗಳು ಯಾವರೀತಿ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ ಅನ್ನೋ ಚಿತ್ರದ ಕಥೆ. ಸ್ಕ್ರಿಪ್ಟ್ ಮಾಡುವಾಗ ಅಂದುಕೊಂಡದ್ದನ್ನು ತೆರೆಮೇಲೆ ತರುವುದು ತುಂಬಾ ಕಷ್ಟ. ನಾಯಕನ ಇನ್ವಾಲ್ವ್ಮೆಂಟ್ ತುಂಬಾ ಚೆನ್ನಾಗಿದೆ. ನಾಯಕಿ ರಾಶಿಕಾ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಬಗ್ಗೆ ಹೇಳೋಹಾಗೇ ಇಲ್ಲ, ತಂದೆ ಪಾತ್ರಕ್ಕೆ ಏನಂದುಕೊಂಡಿದ್ದೆನೋ ಅದಕ್ಕಿಂತ ಹೆಚ್ಚು ಜೀವ ತುಂಬಿದ್ದಾರೆ. ಅವರು ನಮ್ಮ ಸಿನಿಮಾದ ದೊಡ್ಡ ಶಕ್ತಿ ಎಂದರು.

ನಿರ್ಮಾಪಕಿ ನಾಗಶ್ರೀ ಮಾತನಾಡಿ ಚಿತ್ರದ ಟೈಟಲ್ ರವಿಚಂದ್ರನ್ ಅವರಿಗೆ ಹೆಚ್ಚು ಹೊಂದುತ್ತದೆ. ಒಂದೇ ಮಾತಲಿ ಹಾಡನ್ನು ಅವರೇ ರಿಲೀಸ್ ಮಾಡಿಕೊಟ್ಟಿದ್ದರಿಂದ ಎಲ್ಲಕಡೆ ರೀಚ್ ಆಯ್ತು. ರಾಶಿಕಾ ಅವರಿಂದ ಚಿತ್ರಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆ. ಮುಖ್ಯವಾಗಿ ಈ ಸಿನಿಮಾ ಮಾಡಲು ನಮ್ಮ ಮನೆಯವರ ಸಹಕಾರ ತುಂಬಾ ಇತ್ತು.ಅಕ್ಟೋಬರ್ ನಲ್ಲಿ ರಿಲೀಸ್ ಮಾಡೋ ಪ್ಲಾನಿದೆ ಎಂದರು. ಈ ಚಿತ್ರದಲ್ಲಿ ತುಂಬಾ ದಿನಗಳ ನಂತರ ಸೋನು ನಿಗಂ, ಶ್ರೇಯಾ ಘೋಷಾಲ್ ಹಾಡಿದ್ದಾರೆ. ಕಾಶ್ಮೀರ, ರಾಜಸ್ಥಾನ, ಅಂಡಮಾನ್ ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ನಾಯಕ ರಿಶ್ವಿನ್ ಮಾತನಾಡಿ ನಮ್ಮ ಚಿತ್ರದ ಒಂದು ಸಾಂಗ್ ದೊಡ್ಡಮಟ್ಡದ ಹೆಸರು ತಂದುಕೊಟ್ಟಿದೆ. ಇಡೀ ಚಿತ್ರತಂಡದ 4 ವರ್ಷಗಳ ಶ್ರಮ ಈ ಟೀಸರ್ನಲ್ಲಿದೆ. ಅಭಿನಯಕ್ಕೆ ತುಂಬಾ ಅವಕಾಶ ಇರೋ ಪಾತ್ರ ನನ್ನದು. ಚಿತ್ರಕ್ಕೆ ಕಳೆ ಬರೋದೇ ರವಿಚಂದ್ರನ್ ಅವರ ಪಾತ್ರದಿಂದ. ತಂದೆ ಮಗಳ ಎಮೋಷನ್ ಜತೆಗೆ ಹುಡುಗ, ಹುಡುಗಿಯ ಲವ್ ಸ್ಟೋರಿಯೂ ಚಿತ್ರದಲ್ಲಿದೆ ಎಂದರು. ನಾಯಕಿ ರಾಶಿಕಾ ಶೆಟ್ಟಿ ಮಾತನಾಡಿ ಟೀಸರ್ ನೋಡುವಾಗ ಡೇ ಒನ್ ನಿಂದ ನಮ್ಮ ಚಿತ್ರದ ಜರ್ನಿ ನೆನಪಾಯ್ತು. ಒಂದು ಚಿತ್ರಮಾಡಿ ಅದನ್ನು ಜನರಿಗೆ ತಲುಪಿಸೋದು ಕಷ್ಟದ ಕೆಲಸ. ನನ್ನ ಪಾತ್ರದ ಹೆಸರು ಅತೀವ, ಅಪ್ಪ ಅಂದ್ರೆ ಏನು ಬೇಕಾದ್ರೂ ಮಾಡಲು ರೆಡಿ ಇರುವ ಹುಡುಗಿ. ಮನದ ಕಡಲು ನಂತರ ಎರಡನೇ ಚಿತ್ರದಲ್ಲೇ ಇಂಥ ಎಮೋಷನ್ಸ್ ಇರೋ ಪಾತ್ರ ಸಿಕ್ಕಿದೆ ಎಂದು ಪಾತ್ರ ಪರಿಚಯಿಸಿಕೊಂಡರು. ಸಂಗೀತ ಸಂಯೋಜಕ ಪಳನಿ ಡಿ.ಸೇನಾಪತಿ, ಛಾಯಾಗ್ರಾಹಕ ಕೆ.ಎಸ್.ಚಂದ್ರಶೇಖರ್ ಚಿತ್ರದ ಕುರಿತಂತೆ ಮಾತನಾಡಿದರು. ಸೋನು ನಿಗಮ್, ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮಚ್ಚಲ್ ಕೂಡ ಈ ಚಿತ್ರದಲ್ಲಿ ಹಾಡಿದ್ದಾರೆ. ನಟ ಅಚ್ಯುತ್ ಕುಮಾರ್, ವಿಜಯ ಸೂರ್ಯ, ಶಂಕರ್ ಅಶ್ವಥ್ ಉಳಿದ ಪಾತ್ರವರ್ಗದಲ್ಲಿದ್ದಾರೆ.
