ಮೈಸೂರು: ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಶ್ರೀ ಗಣಪತಿ ಆಶ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು 3 ಸಾವಿರ ಗಿಳಿಗಳ ಆರೈಕೆಗೆ ಇಳಿದಿದ್ದಾರೆ.
ಆಶ್ರಮದ ಶುಕವನದಲ್ಲಿ ಸುಮಾರು 3 ಸಾವಿರ ಗಿಳಿಗಳಿದ್ದು, 450 ಪ್ರಭೇದದ ಗಿಳಿಗಳನ್ನ ಸಂರಕ್ಷಿಸಲಾಗಿದೆ. ಸ್ವತಃ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳೇ ಗಿಳಿಗಳ ಆರೈಕೆಯಲ್ಲಿ ತೊಡಗಿದ್ದು, ಸ್ವತಃ ತಾವೇ ನೀರು ಆಹಾರ ನೀಡಿ ಆರೈಕೆ ಮಾಡುತ್ತಿದ್ದಾರೆ. ಆಶ್ರಮಕ್ಕೆ ಹೊರಗಿನ ಹಕ್ಕಿಗಳು ಸಂಪರ್ಕ ಮಾಡದಂತೆ ಸುತ್ತಲೂ ಬಲೆ ಹಾಕಲಾಗಿದೆ. ಆಶ್ರಮದ ಸುತ್ತ ಮುತ್ತ ಕೋಳಿಗಳು,ಕೊಕ್ಕರೆಗಳು ಸುಳಿಯದಂತೆ ನೋಡಿಕೊಳ್ಳಲಾಗಿದೆ.
ಮೈಸೂರಿನ ಕುಂಬಾರಕೊಪ್ಪಲು ಮನೆಯೊಂದರಲ್ಲಿ ಇತ್ತೀಚೆಗೆ ಸತ್ತಿದ್ದ ಕೋಳಿ ಹಾಗೂ ಸ್ಮಶಾನದಲ್ಲಿ ಮೃತಪಟ್ಟಿದ್ದ ಪಕ್ಷಿಯ ಮೃತದೇಹದ ಮಾದರಿಗಳನ್ನು ಭೂಪಾಲ್ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಹೈಸೆಕ್ಯೂರಿಟಿ ಅನಿಮಲ್ ಡೀಸಿಸ್ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣವೇ ಸಾಕು ಪಕ್ಷಿಗಳ ಸರ್ವೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ 6,436 ಪಕ್ಷಿಗಳನ್ನು ಕೊಲ್ಲಲು ರ್ನಿಧರಿಸಿದೆ. ಜೊತೆಗೆ ಹಕ್ಕಿಜ್ವರ ಪತ್ತೆಯಾದ ಮೈಸೂರಿನ ಕುಂಬಾರಕೊಪ್ಪಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಈವರೆಗೆ ಒಟ್ಟು 6,436 ಪಕ್ಷಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೀಗಾಗಿ ಕುಂಬಾರಕೊಪ್ಪಲಿನ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.
ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಒಟ್ಟು 17,820 ಮನೆಗಳಿವೆ. ಅದರಲ್ಲಿ 144 ಮನೆಗಳಲ್ಲಿ ಪಕ್ಷಿಗಳಿವೆ. ಈ ಪೈಕಿ ನೈಸರ್ಗಿಕ ಪಕ್ಷಿಗಳು 1,252, ಔದ್ಯಮಿಕ ಪಕ್ಷಿಗಳು 5,100 ಹಾಗೂ ಸಾಕು ಪಕ್ಷಿಗಳು 254 ಎಂದು ಗುರುತಿಸಲಾಗಿದೆ. ಇದರಲ್ಲಿ ಕ್ವೈಲ್ಸ್ 12 ಹಾಗೂ ಟರ್ಕಿ 18 ಸೇರಿ ಒಟ್ಟು 6,436 ಪಕ್ಷಿಗಳಿದ್ದು, ಎಲ್ಲವನ್ನೂ ನಾಶಪಡಿಸಲು ನಿರ್ಧರಿಸಲಾಗಿದೆ.