ಬೆಂಗಳೂರು: ಮಾರ್ಚ್ ತಿಂಗಳಲ್ಲಿ 6 ದಿನಗಳ ಕಾಲ ಬಾಂಕ್ಗಳ ಬಾಗಿಲು ಮುಚ್ಚಲಿದೆ. ಹೊಸ ಪಿಂಚಣಿ ಯೋಜನೆ ರದ್ಧತಿ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ಗಳ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆಕೊಟ್ಟಿದ್ದು, ಇದರ ಪರಿಣಾಮವನ್ನು ಗ್ರಾಹಕರು ಎದುರಿಸಬೇಕಾಗಿದೆ.
ಹೌದು. ಮಾರ್ಚ್ 11ರಿಂದ 13ರವರೆಗೆ ಮೂರು ದಿನಗಳ ಕಾಲ ಮುಷ್ಕರ ನಡೆಸಲು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ಗಳ ನೌಕರರ ಸಂಘಟನೆಗಳು ನಿರ್ಧರಿಸಿವೆ. ಅಂದರೆ ಮಾರ್ಚ್ ತಿಂಗಳ ಎರಡನೇ ವಾರದ ಬುಧವಾರ, ಗುರುವಾರ ಹಾಗೂ ಶುಕ್ರವಾರ ಮುಷ್ಕರ ನಡೆಯಲಿದೆ. ಇದರಿಂದ ಈ ದಿನಗಳಲ್ಲಿ ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯಲ್ಲ.
ಅಲ್ಲದೇ ಮಾರ್ಚ್ ಎರಡನೇ ವಾರ ಹೋಳಿ ಹಬ್ಬವಿದ್ದು, ಈ ಮುಷ್ಕರ ನಡೆಯುವುದರಿಂದ ನಗದು ಮೂಲಕ ವ್ಯವಹರಿಸುವ ಸಾರ್ವಜನಿಕರು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಮಾರ್ಚ್ 8 ಭಾನುವಾರ, ಮಾರ್ಚ್ 10 ಹೋಳಿ ಹುಣ್ಣಿಮೆ ಹಬ್ಬ ಅಂತ ಸರ್ಕಾರಿ ರಜೆಯಿರುತ್ತದೆ. ಇನ್ನು ಮಾರ್ಚ್ 11ರಿಂದ 13ರವರೆಗೂ ಬ್ಯಾಂಕ್ ನೌಕರರು ಮುಷ್ಕರ ನಡೆಯಲಿದೆ. ಆ ಬಳಿಕ ಮಾ. 14ರಂದು ಎರಡನೇ ಶನಿವಾರ, ಮಾ. 15 ಭಾನುವಾರ ಅಂತ ರಜೆ ಇರುತ್ತೆ. ಹೀಗಾಗಿ ಮಾರ್ಚ್ ಎರಡನೇ ವಾರ ಸರಣಿಯಾಗಿ 6 ದಿನಗಳ ಕಾಲ ಬ್ಯಾಂಕ್ಗಳ ಬಾಗಿಲು ಮುಚ್ಚಲಿದ್ದು, ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯುವುದು ಕಷ್ಟ ಎನ್ನಲಾಗುತ್ತಿದೆ.
ಇದರಿಂದ ದಿನನಿತ್ಯದ ವ್ಯವಹಾರಗಳಿಗೆ ಬ್ಯಾಂಕ್ಗಳನ್ನು ಅವಲಂಬಿಸಿರುವವರು ಪರಾದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದು, ಬ್ಯಾಂಕ್ಗಳ ಮೂಲಕ ವಿವಿಧ ಶುಲ್ಕ ಪಾವತಿ, ಡಿಡಿ ಮೂಲಕ ಹಣ ವರ್ಗಾವಣೆ ಹೀಗೆ ಇತರೆ ಬ್ಯಾಂಕ್ ಕೆಲಸಗಳನ್ನು ಗ್ರಾಹಕರು ಮಾ. 7ರ ಅಂತ್ಯದ ವೇಳೆ ಪೂರ್ಣಗೊಳಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.