ಬಳ್ಳಾರಿ: ಸಿಎಂ ಬದಲಾವಣೆ ಆದ್ರೂ ಒಳ್ಳೆ ಆಡಳಿತ ನಡೆಸುತ್ತಾರೆ ಎನ್ನುವ ನಂಬಿಕೆ ಉಳಿದಿಲ್ಲ ಎಂದು ಕಾಂಗ್ರೆಸ್ ನಾಯಕತ್ವ ಬದಲಾವಣೆ ಬೆಳವಣಿಗೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಲೇವಡಿ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ವಿಜಯೇಂದ್ರ, ಮುಖ್ಯಮಂತ್ರಿಗಳು ರಾಜ್ಯಪಾಲರ ಭೇಟಿಗೆ ಅನುಮತಿ ಕೇಳಿದ್ರೆ, ಅದು ಮುಖ್ಯಮಂತ್ರಿಗಳ ಟಿಪಿಯಲ್ಲಿ ಇರುತ್ತೆ. ಸಿಎಂ ಬದಲಾವಣೆ ವಿಚಾರದಲ್ಲಿ ಬಿಜೆಪಿ ಬಳಸಿಕೊಳ್ಳಲ್ಲ. ರಾಜ್ಯ ಕಾಂಗ್ರೆಸ್ಗೆ 136 ಸ್ಥಾನ ನೀಡಿ ಸ್ಥಿರ ಸರ್ಕಾರ ನೀಡಿದೆ. ಈ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ಕೈ ಹಾಕಲ್ಲವೆಂದ ತಿಳಿಸಿದರು. ಇದನ್ನೂ ಓದಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್: ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಅಷ್ಟು ಬೇಗ ಬಗೆಹರಿಯೋ ಹಾಗೆ ಕಾಣಿಸ್ತಿಲ್ಲ. ವರ್ಷದಿಂದ ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಎರಡ್ಮೂರು ದಿನಗಳಿಂದ ಘಟನಾವಳಿಗಳು ನಡೆಯುತ್ತಿವೆ. ಮುಖ್ಯಮಂತ್ರಿ ರಾಜೀನಾಮೆ ಕೊಡ್ತಾರೆ ಎನ್ನುವ ಬೆಳವಣಿಗೆಗಳು ನಡೆಯುತ್ತಿವೆ. ಮುಂದಿನ ಬೆಳವಣಿಗೆ ಹೇಗೆ ನಡೆಯುತ್ತವೆ ಎನ್ನುವ ಊಹೆ ಯಾರಿಗೂ ಇಲ್ಲ. ರಾಜೀನಾಮೆ ಕೊಟ್ಟ ನಂತರ ಈ ಗೊಂದಲ ಮುಂದುವರೆಯುತ್ತವೆ ಎಂದರು.
ಆಡಳಿತ ಪಕ್ಷದ ಆಂತರಿಕ ಕಚ್ಚಾಟದ ಪರಿಣಾಮ ಕರ್ನಾಟಕ ರಾಜ್ಯ ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಸಂಪೂರ್ಣ ನೆಲಕಚ್ಚಿದೆ. ಆರ್ಥಿಕ ದಿವಾಳಿಯತ್ತ ರಾಜ್ಯ ಸಾಗ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ನೋಡಿ ಜನರು ಬೇಸತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ರಸಗೊಬ್ಬರ ಸಮಸ್ಯೆಯಾಗುತ್ತಿದ್ದರೂ, ರೈತರ ಗೋಳನ್ನ ಕೇಳುವವರೇ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರೆಲ್ಲರೂ ಬೆಂಗಳೂರು, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯದ ಜನರ ಪರವಾಗಿ ಕಾಂಗ್ರೆಸ್ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಮುಂದಿನ ಮುಖ್ಯಮಂತ್ರಿ ಆದರೂ ಒಳ್ಳೆಯ ಆಡಳಿತ ನಡೆಸ್ತಾರೆ ಎನ್ನುವ ನಂಬಿಕೆ ಉಳಿದಿಲ್ಲ. ಯಾರೇ ಮುಖ್ಯಮಂತ್ರಿ ಆದ್ರೂ ಸುಧಾರಣೆ ತರಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ: ಕಾಂಗ್ರೆಸ್ ಟ್ವೀಟ್
