ಲಕ್ನೋ: ಮಾಲೀಕನನ್ನು ರಕ್ಷಿಸಲು ವಿಷಪೂರಿತ ಹಾವಿನೊಂದಿಗೆ ಸೆಣಸಾಡಿ ನಾಯಿಯೊಂದು ತನ್ನ ಪ್ರಾಣವನ್ನೇ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.
ತನ್ನ ಯಜಮಾನನೊಂದಿಗೆ ವಾಕಿಂಗ್ ಹೋಗುತ್ತಿದ್ದ ವೇಳೆ ಹಾವನ್ನು ಕಂಡ ನಾಯಿ ಆತನನ್ನು ರಕ್ಷಿಸುವ ಸಲುವಾಗಿ ಹಾವನ್ನು ಕೊಂದು ಹಾಕಿದೆ. ಆದರೆ ದುರದೃಷ್ಟವಶಾತ್, ಹಾವು ಕಚ್ಚಿದ ವಿಷದಿಂದ ನಾಯಿ ಸಾವನ್ನಪ್ಪಿದೆ. ಇದನ್ನೂ ಓದಿ: ಮದುವೆ ಮನೆಗೆ ಬಂದವರಂತೆ ಬಂದ ಅಧಿಕಾರಿಗಳು- ಕೈ ಮುಖಂಡೆ, ಅಳಿಯನ ಮನೆ ಮೇಲೆ ಐಟಿ ರೇಡ್
ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅಮಿತ್ ರೈ ಅವರು ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಧ್ಯಪ್ರದೇಶದ ಪ್ರತಾಪಪುರದಲ್ಲಿ ವಾಸವಾಗಿದ್ದರು. ಮೊದಲಿನಿಂದಲೂ ಶ್ವಾನ ಪ್ರಿಯರಾಗಿದ್ದ ಅಮಿತ್ ಸುಮಾರು ಐದು ವರ್ಷಗಳ ಹಿಂದೆ ಅಮೆರಿಕದ ಬುಲ್ಲಿ ಎಂಬ ನಾಯಿಯನ್ನು ತಂದು ಅದಕ್ಕೆ ಗಬ್ಬರ್ ಎಂದು ಹೆಸರಿಟ್ಟಿದ್ದರು. ತಾವು ಸಾಕಿದ್ದ ಎಲ್ಲಾ ನಾಯಿಗಳಿಗಿಂತಲೂ ಕೊಂಚ ಹೆಚ್ಚು ಪ್ರೀತಿಯನ್ನು ಗಬ್ಬರ್ ಮೇಲೆ ಅಮಿತ್ ಹೊಂದಿದ್ದರು. ಅದೇ ರೀತಿ ಗಬ್ಬರ್ ಕೂಡ ಅಮಿತ್ ವಿಚಾರದಲ್ಲಿ ಬಹಳ ಪೊಸೆಸಿವ್ ಆಗಿತ್ತು. ಅಮಿತ್ ಗದರದೇ ಇದ್ದರೆ ಯಾರನ್ನೂ ಅವರ ಆತನ ಹತ್ತಿರಕ್ಕೆ ಬರಲು ಬಿಡದೇ ರಕ್ಷಣೆ ನೀಡುತ್ತಿತ್ತು.
ಬುಧವಾರ ಪ್ರತಾಪ್ ಪುರದಲ್ಲಿರುವ ತಮ್ಮ ಫಾರ್ಮ್ಹೌಸ್ಗೆ ಅಮಿತ್ ತನ್ನ ನಾಯಿಯೊಂದಿಗೆ ವಾಕಿಂಗ್ಗೆ ತೆರಳಿದ್ದರು. ಈ ವೇಳೆ ದೈತ್ಯ ವಿಷಕಾರಿ ಹಾವು (ರಸ್ಸೆಲ್ಸ್ ವೈಪರ್) ತನ್ನ ಮಾಲೀಕನ ಕಡೆಗೆ ಬರುತ್ತಿರುವುದನ್ನು ನಾಯಿ ಗಮನಿಸಿದೆ ಆದರೆ ಹಾವನ್ನು ಅಮಿತ್ ನೋಡಿಲ್ಲ. ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ
ತನ್ನ ಯಜಮಾನನಿಗೆ ನಿಯತ್ತಾಗಿದ್ದ ಗಬ್ಬರ್ ಅಮಿತ್ನನ್ನು ರಕ್ಷಿಸಲು ತಕ್ಷಣವೇ ಹಾವಿನ ಮೇಲೆ ಎಗರಿಸಿದೆ. ಸುದೀರ್ಘ ಕಾಲ ನಡೆದ ಹಾವು ಮತ್ತು ನಾಯಿ ಕಾಳಗದಲ್ಲಿ ಕೊನೆಗೆ ಗಬ್ಬರ್ ವಿಷಪೂರಿತ ಹಾವನ್ನು ಎರಡು ತುಂಡುಗಳಾಗಿ ಕಚ್ಚಿ ಕೊಂದು ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಹಾವಿನ ವಿಷ ದೇಹದೊಳಗೆ ಹರಡಿದ್ದರಿಂದ ನಾಯಿ ಕೂಡ ಕೆಲ ನಿಮಿಷಗಳಲ್ಲೇ ಕೆಳಗೆ ಬಿದ್ದು ಸಾವನ್ನಪ್ಪಿದೆ.
ಒಟ್ಟಾರೆ ಯಜಮಾನನಿಗಾಗಿ ನಾಯಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದು, ಗಬ್ಬರ್ ಅನನು ಕಳೆದುಕೊಂಡು ಅಮಿತ್ ಹಾಗೂ ಆತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.