– ಪ್ರಾರ್ಥನೆಗೆ ಫಲ ಸಿಗುತ್ತಾ? – ʻಪಬ್ಲಿಕ್ʼ ಪ್ರಶ್ನೆಗೆ ಮುಗುಳ್ನಕ್ಕ ಡಿಸಿಎಂ
– ʻಹೈʼ ನಾಯಕರೊಂದಿಗೆ ಮೂರು ಸುತ್ತಿನ ಸಭೆ ಇಂದು
ನವದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿವಾದಕ್ಕೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ (Congress High command) ದೃಢ ನಿರ್ಧಾರ ಮಾಡಿದಂತಿದೆ. ಇಂದು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ, ಹೈಕಮಾಂಡ್ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ. ಅದಕ್ಕಾಗಿ ಇಂದು ಸಿಎಂ, ಡಿಸಿಎಂ ಜೊತೆಗೆ ನೇರಾನೇರ ಮಾತುಕತೆ ನಡೆಸಲು ಸಮಯ ನಿಗದಿಮಾಡಿದೆ.
ಇಂದು 11 ಗಂಟೆ ಬಳಿಕ ಇಂದಿರಾ ಭವನದಲ್ಲಿ ಮೊದಲು ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಮಾತುಕತೆ ನಡೆಸಲು ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ. ಬಳಿಕ ಡಿಸಿಎಂ ಡಿಕೆಶಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆದ್ರೆ ಈ ವೇಳೆ ಸಂಪುಟ ಪುನಾರಚನೆ ಬಗ್ಗೆಯಷ್ಟೇ ಮಾತುಕತೆ ನಡೆಯಲಿದೆಯಾ ಅಥವಾ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯಲಿದ್ಯಾ? ಡಿಕೆಶಿ (DK Shivakumar) ಸಿಎಂ ಆಗ್ತಾರಾ? ಅನ್ನೋದನ್ನ ಕಾದುನೋಡಬೇಕಿದೆ.

ಒಟ್ಟು ಮೂರು ಸುತ್ತಿನ ಸಭೆ ನಡೆಯುವ ಸಾಧ್ಯತೆಯಿದೆ. ಮೊದಲ ಸುತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ, 2ನೇ ಸುತ್ತಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರೊಟ್ಟಿಗೆ ಸಭೆ ನಡೆಸಿದ ಬಳಿಕ ಅಂತಿಮ ಸುತ್ತಿನಲ್ಲಿ ಇಬ್ಬರು ನಾಯಕರನ್ನು ಮುಖಾಮುಖಿ ಕೂರಿಸಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯಲ್ಲೂ ಡಿಕೆಶಿ ದೂರ ದೂರ
ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲೂ ಸಿಎಂ & ಟೀಂ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಬೆಂಗಳೂರಿನಿಂದ ಹೋದ ಬಳಿಕ ಕರ್ನಾಟಕದ ಭವನದಿಂದಲೂ ದೂರ ಉಳಿದಿದ್ದಾರೆ. ಕರ್ನಾಟಕ ಭವನಕ್ಕೆ ತೆರಳದ ಡಿಕೆಶಿ ದೆಹಲಿಯಲ್ಲಿರೋ ತಮ್ಮ ಖಾಸಗಿ ನಿವಾಸದಲ್ಲೇ ಉಳಿದು, ಸಹೋದರ ಡಿಕೆ ಸುರೇಶ್ ಅವರೊಂದಿಗೆ ರಣತಂತ್ರ ರೂಪಿಸಿದ್ದಾರೆ.
ಡಿಕೆಶಿಗೆ ಟೆನ್ಷನ್
ಹೈಕಮಾಂಡ್ ನಾಯಕರ ಸಭೆ ಹತ್ತಿರವಾಗುತ್ತಿದ್ದಂತೆ ಡಿಸಿಎಂ ಡಿಕೆಶಿ ಅವರಿಗೆ ಟೆನ್ಷನ್ ಶುರುವಾಗಿದೆ. ಬೆಳಗ್ಗೆ 4 ವರೆಗೂ ಮಲಗದ ಡಿಕೆ ರಾತ್ರಿಯೆಲ್ಲಾ ಸಹೋದರ ಡಿಕೆ ಸುರೇಶ್ ಅವರೊಂದಿಗೆ ಕುಳಿತು ಮಾತುಕತೆ ನಡೆಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇದೆ ವೇಳೆ ದೆಹಲಿಯಲ್ಲಿ ನಾಯಕತ್ವದ ಬದಲಾವಣೆಗೆ ಸಂಬಂಧಿಸಿದಂತೆ `ಪ್ರಾರ್ಥನೆಗೆ ಫಲ ಸಿಗುತ್ತಾ?’ ಎನ್ನುವ `ಪಬ್ಲಿಕ್ ಟಿವಿ’ ಪ್ರಶ್ನೆಗೆ ಮುಗುಳ್ನಕ್ಕು ತೆರಳಿದ್ದಾರೆ.
