ಬೆಂಗಳೂರು: ಕಂಠೀರವ ಸ್ಟೇಡಿಯಂನಲ್ಲಿ ನಟ, ಮಾಜಿ ಸಚಿವ ಅಂಬರೀಶ್ ಅವರ ಅಂತಿಮ ದರ್ಶನ ಪಡೆದ ಸಚಿವ ಡಿ.ಕೆ.ಶಿವಕುಮಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು. ಅಂಬರೀಶ್ ಅವರನ್ನು ಮದುವೆ ಹೇಗೆ ಒಪ್ಪಿಸಲಾಯ್ತು ಎಂಬ ಘಟನೆಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.
ಒಂದು ಸಾರಿ ಎಲ್ಲರು ಮಂಗಳೂರಿಗೆ ಹೋಗುತ್ತಿದ್ದರು. ದಿ.ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ನನ್ನನ್ನು ಕರೆದಿದ್ದರು. ನಾನು ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವನಾಗಿದ್ದರಿಂದ ಏನೋ ಒಂದು ಕಾರಣ ಹೇಳಿ ಹೋಗಿದ್ದೆ. ಅಂದು ಸಾಯಂಕಾಲ ನಾನು, ಶ್ರೀಕಂಠಯ್ಯನವರು, ಅಂಬರೀಶ್, ಅಪ್ಪಾಜಿ ನಾಯಕ್, ಶ್ರೀಪತಿರಾಯರು ಸೇರಿದಂತೆ ನಾಲ್ಕೈದು ಜನ ಮಾತನಾಡುತ್ತಾ ಕುಳಿತೆವು.
ಅಂದು ಮದುವೆ ಆಗ್ತೀನಿ ಅಂತಾ ಹೇಳುತ್ತಾ ಅಂಬರೀಶ್ ದಿನಗಳನ್ನು ಮುಂದೂಡುತ್ತಿದ್ದರು. ಹೀಗಾಗಿ ಶ್ರೀಕಂಠಯ್ಯನವರು ಆ ವೇಳೆ ಅಂಬರೀಶ್ ಮದುವೆ ವಿಚಾರ ಪ್ರಸ್ತಾಪ ಮಾಡಿದರು. ಅಂಬರೀಶ್ ನಿನಗೆ 39 ವಯಸ್ಸು ಆಯ್ತು. ಯಾವಾಗ ಮದುವೆ ಆಗ್ತೀಯಾ ಹೇಳು ನೀನು ಎಂದು ಎತ್ತರದ ಧ್ವನಿಯಲ್ಲಿ ಕೇಳಿದರು. ಯಾಕೆ ಆ ಹುಡುಗಿಯನ್ನ (ಸುಮಲತಾ) ಕಾಡಸ್ತೀಯಾ? ಆದಷ್ಟು ಬೇಗ ಮದ್ವೆ ಆಗು ಎಂದು ಗದರಿದರು. ಇದನ್ನು ಓದಿ: ಅಂಬಿ ಬರೆದ ಮೊದಲ ಪ್ರೇಮ ಪತ್ರದಲ್ಲಿ ಏನಿತ್ತು?
ನಿನ್ನ ಮದುವೆ ವಿಚಾರ ಮಾತಾಡೋದಕ್ಕೆ ಎಲ್ಲರನ್ನು ಕರೆಸಿದ್ದೇನೆ. ಇವತ್ತು ಎರಡರಲ್ಲಿ ಒಂದು ತೀರ್ಮಾನ ಆಗಬೇಕು ಎಂದು ಶ್ರೀಕಂಠಯ್ಯನವರು ಹೇಳಿದರು. ಚುಂಚನಗಿರಿ ಸ್ವಾಮಿಗಳು ಕೂಡ ಹೇಳಿದ್ದಾರೆ. ಅದ್ದರಿಂದಲೇ ನಾವೆಲ್ಲಾ ಇಲ್ಲಿ ಸೇರಿದ್ದೇವೆ ಎಂದು ಒತ್ತಾಯ ಮಾಡಿದರು. ಶ್ರೀಕಂಠಯ್ಯ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ಅಂಬಿ ಒಂದು ವಾರದಲ್ಲಿ ಅಂತಿಮ ತೀರ್ಮಾನ ತಿಳಿಸುವುದಾಗಿ ಹೇಳಿದರು. ಇದನ್ನು ಓದಿ: ಪತ್ನಿಗೆ ಕಂಡೀಷನ್ ಹಾಕ್ತೀರಾ ಪ್ರಶ್ನೆಗೆ ಅಂಬಿಯ ಪ್ರತಿಕ್ರಿಯೆ ಹೀಗಿತ್ತು
ಅಂದು ನನಗೆ ಅಂಬರೀಶ್ ಅವರ ಬಳಿ ಜೋರು ಮಾಡಿ ಮಾತನಾಡುವ ಶಕ್ತಿ ಇರಲಿಲ್ಲ. ಆದರೆ ಶ್ರೀ ಕಂಠಯ್ಯನವರು ದೊಡ್ಡ ಜಗಳವನ್ನೆ ಮಾಡಿದ್ದರು. ಆಗ ಆಯ್ತು ಬಿಡಿ ಅಣಯ್ಯ ಎಂದು ಅಂಬಿ ಹೇಳಿದ್ದರು. ಆ ಬಳಿಕವೇ ಅವರಿಬ್ಬರ ಪ್ರೇಮದ ಬೆಸುಗೆಗೆ ಇಡೀ ಸಮಾಜ ಬೆಂಬಲಕ್ಕೆ ನಿಂತಿದ್ದನ್ನು ಕಂಡ ಅಂಬಿ ಮದುವೆಗೆ ಅಂತಿಮವಾಗಿ ಒಪ್ಪಿಗೆ ನೀಡಿದರು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv