ರಾಮನಗರ: ರಾಜ್ಯ ರಾಜಕಾರಣದಲ್ಲಿ ಬದ್ಧ ವೈರಿಗಳೆಂದೇ ಕರೆಸಿಕೊಳ್ಳುವ ಜೆಡಿಎಸ್ನ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮುಖಾಮುಖಿಯಾಗಿ ಕೈ ಕುಲುಕಿ ಮಾತುಕತೆ ನಡೆಸಿದ ಘಟನೆ ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಣಸನಹಳ್ಳಿ ಗ್ರಾಮದ ನಿವಾಸಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಂಜಪ್ಪ ಶುಕ್ರವಾರದಂದು ಸಾವನ್ನಪ್ಪಿದ್ದರು. ಇಂದು ಅವರ ಅಂತ್ಯಸಂಸ್ಕಾರದ ಕಾರ್ಯ ನೆರವೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಎಚ್ಡಿ ಕುಮಾರಸ್ವಾಮಿ ಬಂದಿದ್ದರು. ಕುಮಾರಸ್ವಾಮಿ ಭೇಟಿಗೂ ಮುನ್ನವೇ ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಅಂತಿಮ ನಮನ ಸಲ್ಲಿಸಿ ಹೊರಟಿದ್ದ ವೇಳೆ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಎದುರಾದರು.
ಈ ವೇಳೆ ಕಾರಿನಲ್ಲಿ ಹೊರಟಿದ್ದ ಡಿ.ಕೆ ಶಿವಕುಮಾರ್ ಅವರು ಕಾರಿನಿಂದ ಇಳಿದು ಕುಮಾರಸ್ವಾಮಿ ಅವರ ಬಳಿಗೆ ನಡೆದು ಹೋಗಿ ಮಾತನಾಡಿಸಿದ್ರು. ಅಲ್ಲದೇ ಕೈ ಕುಲುಕಿ ಇಬ್ಬರೂ ಸಹ ಆತ್ಮೀಯವಾಗಿ ಸಲುಗೆಯಿಂದ ಮಾತನಾಡಿದರು. ಇದನ್ನ ನೋಡಿ ಸಾವಿನ ಮನೆಯ ಬಳಿ ನೆರೆದಿದ್ದ ಜನರೆಲ್ಲಾ ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾದ್ರು.