ಸಿನಿಮಾ ಮತ್ತು ರಂಗಭೂಮಿಯಲ್ಲಿ ಸಕ್ರೀಯರಾಗಿರುವ ನಿರ್ದೇಶಕ ರಾಜುಗುರು ಎರಡೂ ಕ್ಷೇತ್ರಗಳಲ್ಲೂ ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ರಂಗಭೂಮಿಯಲ್ಲಿನ ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತಲೇ ಇದ್ದಾರೆ. ಇದೀಗ ಪೂಲನ್ ದೇವಿ ಕುರಿತಾಗಿ ನಾಟಕವೊಂದನ್ನು ಅವರು ನಿರ್ದೇಶನ ಮಾಡಿದ್ದು, ಈ ನಾಟಕ ಜುಲೈ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.
ತನ್ನನ್ನು ದೌರ್ಜನ್ಯಕ್ಕೆ ಒಳಪಡಿಸಿದ ರಾಕ್ಷಸರಿಗೆ ಭಯದ ರುಚಿ ತೋರಿಸಿದ ಚಂಬಲ್ ಕಣಿವೆಯ ಹೆಣ್ಣು ಬಂದೂಕು ಈ ಪೂಲನ್ ದೇವಿ ಎಂದು ಟ್ಯಾಗ್ ಲೈನ್ ಕೊಟ್ಟು ನಾಟಕ ಹೆಣೆದಿರುವ ರಾಜಗುರು, ಈ ನಾಟಕಕ್ಕೆ ನಿರ್ದೇಶನದ ಜೊತೆಗೆ ಸಂಗೀತ ಮತ್ತು ರಚನೆಯನ್ನೂ ಮಾಡಿದ್ದಾರೆ. ಪೂಲನ್ ದೇವಿಯ ಬದುಕನ್ನು ಮತ್ತೊಂದು ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಹಾಗಾಗಿ ಇದೊಂದು ವಿಭಿನ್ನ ಪ್ರಯೋಗ ಎಂದು ಹೇಳುತ್ತಾರೆ. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?
ಪೂಲನ್ ದೇವಿಯ ಪಾತ್ರದಲ್ಲಿ ನಯನ ಸೂಡ ಕಾಣಿಸಿಕೊಂಡಿದ್ದಾರೆ. ಇವರೇ ನಾಟಕಕ್ಕೆ ವಸ್ತ್ರವಿನ್ಯಾಸದ ಜೊತೆಗೆ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಶಶಿಧರ್ ಅಡಪ ಅವರ ರಂಗ ಸಜ್ಜಿಕೆ. ಎಂ.ಜಿ ನವೀನ್ ಅವರ ಬೆಳಕು ಮತ್ತು ಜಯರಾಜ್ ಹುಸ್ಕೂರು ಅವರ ಪ್ರಸಾಧನ ನಾಟಕಕ್ಕೆ ಇರಲಿದೆ. ರಂಗಪಯಣದ 14ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ನಾಟಕ ಪ್ರದರ್ಶನವಾಗಲಿದೆ.