ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಆರ್ಎಸ್ಎಸ್ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡುವೆ ಬಿಜೆಪಿ ಕಚೇರಿಯಲ್ಲಿಯೇ ಗಲಾಟೆ ನಡೆದಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಸೆಪ್ಟೆಂಬರ್ 16ರಂದು ಸುಮಾರು 9.30 ಗಂಟೆಗೆ ಆಗ ತಾನೇ ಬಿಎಸ್ವೈ ಕಚೇರಿಗೆ ಆಗಮಿಸಿದ್ದರು. ಅದಕ್ಕೂ ಮೊದಲೇ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಕಚೇರಿಯಲ್ಲಿದ್ದರು. ಕಚೇರಿಯ ಮೂರನೇ ಮಹಡಿಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಆಯೋಜಿಸಲಾಗಿತ್ತು. ಮೊದಲನೇ ಮಹಡಿಯ ರಾಜ್ಯಾಧ್ಯಕ್ಷರ ಕೊಠಡಿಯಲ್ಲಿ ಬಿಎಸ್ವೈ ಇದ್ದರು. ಸಂತೋಷ್ ಕೂಡ ಮೊದಲ ಮಹಡಿಯಲ್ಲಿಯೇ ಇದ್ದರು. ಆಗ ಇದ್ದಕ್ಕಿದ್ದಂತೆ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು.
ಕೇಂದ್ರ ನಾಯಕರಿಗೆ ಚಾಡಿ ಹೇಳ್ತೀರಾ? ಚಾಡಿ ಹೇಳೋದನ್ನ ನಿಲ್ಲಿಸಿ. ಇನ್ನಾದ್ದರೂ ನನ್ನ ಮುಗಿಸೋ ಪ್ರಯತ್ನ ನಿಲ್ಲಿಸಿ. ನಾನು ಏನು ಅಂತಹ ಕೆಲಸ ಮಾಡಿದ್ದೀನಿ? ಸುಮ್ನೆ ಇಲ್ಲಸಲ್ಲದನ್ನ ಹೇಳಿ ಏಕೆ ಗೊಂದಲ ಸೃಷ್ಟಿಸ್ತೀರಾ ಎಂದು ಬಿಎಸ್ವೈ ಕೆಂಡಾಮಂಡಲರಾಗಿದ್ದರು ಎನ್ನಲಾಗಿದೆ.
ನೀವು ಕಿರುಚಾಡೋದನ್ನ, ಅರುಚಾಡೋದನ್ನ ನಿಲ್ಲಿಸಿ. ನಾನು ಸಂಘಟನೆಗೆ ಏನು ಕೆಲಸ ಮಾಡಬೇಕು ಅದನ್ನು ಮಾಡ್ತಾ ಇದೀನಿ. ನಿಮ್ಮ ಕೆಲಸ ನಿಮಗೆ, ನನ್ನ ಕೆಲಸ ನನಗೆ ಎಂದು ಬಿಎಸ್ವೈಗೆ ಅಲ್ಲಿಯೇ ಸಂತೋಷ್ ತಿರುಗೇಟು ನೀಡಿ ಹೊರನಡೆದರು ಎಂದು ಹೇಳಲಾಗಿದೆ.
ಆಗ ಇಡೀ ಕಚೇರಿಯೇ ಸ್ತಬ್ಧ ಆಗಿತ್ತು. ಬಳಿಕ ಅವತ್ತೇ ಮಧ್ಯಾಹ್ನ ನಡೆದ ಸಭೆಯಲ್ಲೂ ಸಂತೋಷ್ ಮುನಿಸಿಕೊಂಡಿದ್ದರು. ರಾಜ್ಯ ಚುನಾವಣಾ ಉಸ್ತುವಾರಿ ಜಾವ್ಡೇಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂತೋಷ್ ವೇದಿಕೆಯನ್ನು ಕೂಡ ಏರಲಿಲ್ಲ. ಸಂತೋಷ್ ಅವರನ್ನು ವೇದಿಕೆಗೆ ಆಹ್ವಾನಿಸಿದರೂ ವೇದಿಕೆ ಕೆಳಗೆ ಹಿಂದಿನ ಸಾಲಿನಲ್ಲಿ ಕುಳಿತಿದ್ದರು ಎಂದು ಮೂಲಗಳು ತಿಳಿಸಿವೆ.