ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಹಾಗೂ ನಟಿ ರೇಣು ದೇಸಾಯಿ ಮದುವೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪವನ್ ಕಲ್ಯಾಣ್ ಅವರಿಂದ ವಿಚ್ಛೇದನೆ ಪಡೆದ ನಂತರ ರೇಣು ತಮ್ಮೆರಡು ಮಕ್ಕಳೊಂದಿಗೆ ಪುಣೆಯಲ್ಲಿ ನೆಮ್ಮದಿಯಾಗಿದ್ದರು. ಮಕ್ಕಳೊಂದಿಗೆ ದೇಶ ಸುತ್ತುತ್ತಾ, ಆ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಹಾಯಾಗಿದ್ದರು. ಬಹುಶಃ ಒಂಟಿ ಜೀವನಕ್ಕೆ ಬೇಸರ ಆಗಿರಬೇಕು. ಹಾಗಾಗಿ ಜೊತೆಗಾರ ಬೇಕು ಎನ್ನುವ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ಮದುವೆಯಾದ ನಂತರ ರೇಣು ಸಿನಿಮಾ ರಂಗದಿಂದ ದೂರ ಉಳಿದವರು. ಥೇಟ್ ಹೌಸ್ ವೈಫ್ ರೀತಿಯಲ್ಲೇ ಬದುಕು ಸಾಗಿಸಲು ಶುರು ಮಾಡಿದರು. ಪವನ್ ಕಲ್ಯಾಣ್ ಅವರ ಇಷ್ಟ ಕಷ್ಟಗಳಿಗೆ ಜೊತೆಯಾದರು. ಎರಡು ಮಕ್ಕಳು ಆದ ನಂತರ ಇಬ್ಬರ ನಡುವೆ ಹೊಂದಾಣಿಕೆ ಆಗದೇ ಇರುವ ಕಾರಣಕ್ಕಾಗಿ ಡಿವೋರ್ಸ್ ಪಡೆದರು. ಆನಂತರ ತನ್ನ ತವರು ಮನೆಯಲ್ಲೇ ಅವರು ಮಕ್ಕಳೊಂದಿಗೆ ವಾಸವಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ
ಈ ಕಡೆ ಪವನ್ ಕಲ್ಯಾಣ್ ಮತ್ತೊಂದು ಮದುವೆ ಆದರೂ, ರೇಣು ಆ ಕುರಿತು ಯೋಚಿಸಿರಲಿಲ್ಲ. ಕಳೆದ ವರ್ಷವಷ್ಟೇ ಎಂಗೇಜ್ ಮೆಂಟ್ ರಿಂಗ್ ತೋರಿಸುವ ಮೂಲಕ ಮತ್ತೊಂದು ಮದುವೆ ಆಗುವ ಕುರಿತು ಸೂಚನೆ ನೀಡಿದ್ದರು. ಆನಂತರ ಮತ್ತೆ ಅದು ಸುದ್ದಿ ಆಗಲಿಲ್ಲ. ಈ ಕುರಿತು ಅವರು ಸ್ಪಷ್ಟನೆಯನ್ನೂ ಕೊಡಲಿಲ್ಲ. ಹಾಗಾಗಿ ರೇಣು ಕದ್ದುಮುಚ್ಚಿ ಮದುವೆ ಆಗಿದ್ದಾರಾ ಎನ್ನುವ ಅನುಮಾನವೂ ಮೂಡಿತ್ತು. ಇದೀಗ ಮದುವೆ ಕಾರಣಕ್ಕೆ ಅವರು ಮತ್ತೆ ಸುದ್ದಿ ಆಗಿದ್ದಾರೆ.
ಸದ್ಯ ಮಕ್ಕಳ ಜೊತೆ ರಜೆ ಕಳೆಯಲು ರೇಣು ವಿದೇಶಕ್ಕೆ ಹಾರಿದ್ದರು. ಅಲ್ಲಿಂದಲೇ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೀವನದಲ್ಲಿ ಅಗತ್ಯವಿದ್ದಾಗ ಕೈ ಹಿಡಿದು ನಡೆಸುವ, ಮಾರ್ಗದರ್ಶನ ಮಾಡುವಂತಹ ಜೊತೆಗಾರರು ಬೇಕು ಎಂದು ಅವರು ಪೋಸ್ಟ್ ಮಾಡಿದ್ದು, ಜೊತೆಗಾರ ಬೇಕು ಎನ್ನುವುದು ಮದುವೆ ಅರ್ಥವನ್ನು ಸೂಚಿಸುತ್ತಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.