ಧಾರವಾಡ: ಕಾಂಗ್ರೆಸ್ ಪಕ್ಷ 70 ವರ್ಷದಿಂದ ಪೋಷಿಸಿಕೊಂಡು ಬಂದಿದ್ದ ಕಳಂಕ ಇಂದು ಕೊನೆಯಾಗಿದೆ. ಅನುಚ್ಛೇಧ 370 ರದ್ದು ಮಾಡಿದ್ದರಿಂದ ದೇಶ ಅಖಂಡವಾಗಿದೆ ಎಂದು ಶ್ರೀರಾಮ ಸೇನೆಯು ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ,
ಧಾರವಾಡದಲ್ಲಿ ಪಬ್ಲಿಕ್ ಟಿವಿ ಜೊತೆಯಲ್ಲಿ ಮಾತನಾಡಿದ ಅವರು ಅಂದಿನ ಪ್ರಧಾನಿ ನೆಹರು ಅವರು ಮಾಡಿದ ತಪ್ಪು ಸರಿಮಾಡಲು ನರೇಂದ್ರ ಮೋದಿ ಬರಬೇಕಾಯಿತು. ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಣಯವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.
ಇಡೀ ಭಾರತದಲ್ಲಿ ಕಾಶ್ಮೀರ ಮಾತ್ರ ಬೇರೆ ಇತ್ತು. ಇವತ್ತು ಮೋದಿ ಮತ್ತು ಅಮಿತ್ ಶಾ ತೆಗೆದುಕೊಂಡು ಇರುವ ಈ ನಿರ್ಧಾರದಿಂದ ಭಾರತ ಇವತ್ತು ಒಂದಾಗಿದೆ. ಭಾರತದಲ್ಲಿ ಒಂದು ರಾಷ್ಟ್ರ, ಒಂದು ಧ್ವಜ, ಒಂದು ರಾಷ್ಟ್ರ ಗೀತೆ ಇದೆ. 370 ನೇ ಅನುಚ್ಛೇಧ ನೆಹರೂ ಅವರು ಜಾರಿಗೆ ತಂದ ಪಾಪದ ಕೂಸು. ಇದರಿಂದ ಕಾಶ್ಮೀರದಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕೆ ಸಹಾಯ ಮಾಡುವವರಿಗೆ ಕುಮ್ಮಕ್ಕು ಕೊಡುತ್ತಿತ್ತು. ಈ ಅನುಚ್ಛೇಧದಿಂದ ಎಷ್ಟೋ ಸೈನಿಕರು ಪ್ರಾಣ ಕಳೆದುಕೊಂಡರು, ಅಂಗವಿಕಲರಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರದಲ್ಲಿ ಇರುವ ಒಂದು ವರ್ಗದ ಸ್ವಾರ್ಥಕ್ಕಾಗಿ ಅಲ್ಲಿನ ಸಾಮಾನ್ಯ ಮುಸ್ಲಿಂರನ್ನು ಬಲಿ ತೆಗೆದುಕೊಳ್ಳುತ್ತಿದ್ದರು. ಕಾಶ್ಮೀರಕ್ಕೆ ನೀಡಿದ ಈ ವಿಶೇಷ ಸ್ಥಾನಮಾನದಿಂದ ಸುಮಾರು 7 ಲಕ್ಷ ಹಿಂದೂಗಳನ್ನು ಕಾಶ್ಮೀರದಿಂದ ಹೊರಹಾಕಿದರು. ಗಡಿಯಲ್ಲಿ ಗನ್ ಹಿಡಿದು ಕಾವಲು ಕಾಯುತ್ತಿದ್ದ ಸೈನಿಕರ ಮೇಲೆ ಕಲ್ಲು ಹೊಡೆಯುತ್ತಿದ್ದ ಕಿಡಿಗೇಡಿಗಳಿಗೆ, ಪಾಕಿಸ್ತಾನದ ಏಜೆಂಟ್ಗಳಿಗೆ ಇಂದು ಮೋದಿ ಸರ್ಕಾರ ಒಳ್ಳೆಯ ಉತ್ತರವನ್ನು ನೀಡಿದೆ ಎಂದು ಹೇಳಿದರು.