ಬೆಂಗಳೂರು: ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಆಕಾಸ್ಮಿಕ ಸಾವು ಎಂದು ಮಗಳು ಬಿಂಬಿಸಿದ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೊಲೆ ಮಾಡಿದ ಪಾಪಿ ಮಗಳು ವೇಣಿ ಮತ್ತು ಆಕೆಯ ಗಂಡ ರಾಜುನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ವೈಯಾಲಿಕಾವಲ್ ನಲ್ಲಿ ವಾಸವಾಗಿರುವ ಅನುಸೂಯಾ ಕೊಲೆಯಾಗಿರುವ ದುದೈರ್ವಿ.
ಫೆಬ್ರವರಿಯಲ್ಲಿ ತಾಯಿ ಅನುಸೂಯಾ ಮನೆಗೆ ಮಗಳು ವೇಣಿ ಮತ್ತು ಆಕೆಯ ಗಂಡ ರಾಜು ಬಂದಿದ್ದರು. ಈ ವೇಳೆ ಹಣಕಾಸಿನ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ಗಲಾಟೆಯಾಗಿತ್ತು. ಗಲಾಟೆ ತಾರಕ್ಕೇರಿದ ಪರಿಣಾಮ ತಾಯಿ ಅನುಸೂಯಾ ಮೇಲೆ ಮಗಳು ವೇಣಿ ಮತ್ತು ಆಕೆಯ ಗಂಡ ರಾಜು ತೀವ್ರವಾಗಿ ಹಲ್ಲೆ ಮಾಡಿ ಉಸಿರುಗಟ್ಟಿಸಿದ್ದರು. ಅನುಸೂಯ ಅವರು ಆಸ್ವಸ್ಥರಾಗಿ ಕೆಳಗೆ ಬಿದ್ದದ್ದರು. ಆದರೆ ಲೋ ಬಿಪಿಯಾಗಿ ಬಿದ್ದಿದ್ದಾರೆ ಎಂದು ಈ ಜೋಡಿ ಬಿಂಬಿಸಿತ್ತು.
ನಂತರ ತಾಯಿ ಅನುಸೂಯಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಸಾವಿನ ಸುದ್ದಿ ಕೇಳಿ ಮಗಳು ವೇಣಿ ಮತ್ತು ರಾಜು ಶವದ ಮುಂದೆ ಬಿದ್ದು ಕಣ್ಣೀರಿಟ್ಟು ಹೈಡ್ರಾಮ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ವೈಯಾಲಿಕಾವಲ್ ಪೊಲೀಸರಿಗೆ ಮೃತ ಅನುಸೂಯಾರ ಮರಣೋತ್ತರ ಪರೀಕ್ಷೆ ವರದಿ ನೋಡಿ ಶಾಕ್ ಆಗಿತ್ತು. ಅನುಸೂಯಾ ದೇಹದ ಮೇಲೆ ತೀವ್ರವಾದ ಗಾಯದ ಗುರುತುಗಳು ಮತ್ತು ಉಸಿರುಗಟ್ಟಿಸಿರುವುದು ಪತ್ತೆಯಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ತಾಯಿಯನ್ನೇ ಕೊಲೆ ಮಾಡಿದ್ದ ಮಗಳು ಮತ್ತು ಆಳಿಯನನ್ನು ವಿಚಾರಣೆ ನಡೆಸಿ ಬಂಧಿಸಿದ್ದಾರೆ.