ತುಳುನಾಡ ದೈವಾರಾಧನೆ ಹೆಸರಿನಲ್ಲಿ ದುಡ್ಡು ಮಾಡುವವರ ವಿರುದ್ಧ ದೈವಾರಾಧಕರು ತೊಡೆತಟ್ಟಿದ್ದಾರೆ. ಇನ್ಮುಂದೆ ವ್ಯಾಪಾರದ ಹೆಸರಿನಲ್ಲಿ ದೈವಾರಾಧನೆ ನಡೆಸಿದವರು, ಮುಂದೊಂದು ದಿನ ಕಾನೂನು ಕ್ರಮ ಹಾಗೂ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ದೈವಾರಾಧಕರು ತಿಳಿಸಿದ್ದಾರೆ. ದೈವಾರಾಧನೆ ಸಿನಿಮಾ ಮಾಡಿದರೆ, ಮುಲಾಜಿಲ್ಲದೇ ವಿರೋಧಿಸಲಾಗುವುದು ಎಂದಿದ್ದಾರೆ.
ದೈವದ ಕೋಲಾ (Buta Kola), ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದಾರೆ ಎಂದು ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿಗಳು ಆರೋಪಿಸಿವೆ. ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿವೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
ಕರಾವಳಿ (Karavali) ಹೊರಗಿನ ದೈವಾರಾಧನೆ ವಿರುದ್ಧ ಮಂಗಳೂರಿನ ಜನ ಸಿಡಿದೆದ್ದಿದ್ದಾರೆ. ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ಮಂಗಳೂರಿನ ಕುತ್ತಾರು ಬಳಿಕ ಕೊರಗಜ್ಜನ (Koragajja) ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು (Mangaluru) ಹಾಗೂ ಸಮಸ್ತ ದೈವಾರಾಧಕರಿಂದ ಪ್ರಾರ್ಥನೆ ಸಲ್ಲಿಸಲಾಗಿದೆ. ಮೈಸೂರು ಮೂಲದ ಕೆಲ ಭಕ್ತರೂ ಆದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಆದಿ ಸ್ಥಳ ಮತ್ತು ತುಳುನಾಡು ಹೊರತುಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಅವಕಾಶ ಇಲ್ಲ. ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಯುತ್ತಿದೆ. ಕೊರಗಜ್ಜ ಆದಿಸ್ಥಳ ಬಿಟ್ಟು ಬೇರೆ ಕಡೆ ಆರಾಧನೆ ಮಾಡುತ್ತಿರೋದು ವ್ಯವಹಾರದ ಉದ್ದೇಶ. ಇದನ್ನ ತಡೆದ ಮೈಸೂರಿನ ಕೆಲವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸಿನಿಮಾ ಮತ್ತು ಸಾಮಾಜಿಕ ತಾಣಗಳ ಕಾರಣದಿಂದ ಈ ದಂಧೆ ನಡೀತಾ ಇದೆ. ಇದನ್ನ ನಿಲ್ಲಿಸದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ಕರಾವಳಿಯ ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ.