ಬೆಂಗಳೂರು: ಜಾರಿ ನಿರ್ದೇಶಾಲಯ ಸಚಿವ ಡಿ.ಕೆ. ಶಿವಕುಮಾರ್ ಅವರ ಎಫ್ಐಆರ್ ಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಡಿ.ಕೆ ಸುರೇಶ್ ತಡರಾತ್ರಿ ಅಣ್ಣನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಶನಿವಾರ ತಡರಾತ್ರಿ ಸುಮಾರು 11.30 ಗಂಟೆಗೆ ಶಿವಕುಮಾರ್ ಮನೆಗೆ ಸುರೇಶ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸುರೇಶ್ ಅವರು ಶುಕ್ರವಾರ ಬೆಳಗ್ಗೆ ದೆಹಲಿಗೆ ಹೋಗಬೇಕಿತ್ತು. ಆದರೆ ಮಾಧ್ಯಮಗಳಲ್ಲಿ ವದಂತಿ ಬಂದ ಹಿನ್ನೆಲೆಯಲ್ಲಿ ಇಲ್ಲಿಯೇ ಉಳಿದುಕೊಂಡಿದ್ದಾರೆ ಅಂತ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮತಾನಾಡುತ್ತಾ ತಿಳಿಸಿದ್ದಾರೆ.
ನಮ್ಮ ಮನೆಗೆ ನಾನು ಭೇಟಿ ಕೊಡುವುದಕ್ಕೆ ಯಾರದ್ದಾದರೂ ಒಪ್ಪಿಗೆ ತೆಗೆದುಕೊಳ್ಳಬೇಕಾ. ನಮ್ಮ ಮನೆಗೆ ನಾನು ಬರುವುದಕ್ಕೆ, ನಮ್ಮ ಅಣ್ಣನ ಜೊತೆ ನಾನು ಮಾತನಾಡುವುದಕ್ಕೆ ಯಾರಿಗಾದರೂ ಹೇಳಿ ಬರಬೇಕಾ ಎಂದು ಪ್ರಶ್ನಿಸಿದ್ದಾರೆ. ಅವರು ಸಿಗುವುದೇ ರಾತ್ರಿ ಹೊತ್ತು. ಹಾಗಾಗಿ ಭೇಟಿ ಮಾಡಿದ್ದೇನೆ. ನನಗೆ ಏನು ವಿಚಾರಗಳು ಗೊತ್ತಿದಿಯೋ ಆ ವಿಚಾರಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ನಾವು ಏನೂ ತಪ್ಪು ಮಾಡಿಲ್ಲ. ಉಹಾ ಪೋಹಗಳು ನಡೆಯುತ್ತಿವೆ. ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರ ಪಡೆಯಲು ಮುಂದಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡಿ ಅವರು ಎಫ್ಐಆರ್ ಮಾಡಿದರೆ ನಾವು ಉತ್ತರ ಕೊಡುತ್ತೇವೆ. ಅರೆಸ್ಟ್ ಮಾಡುತ್ತಾರೋ ಮಾಡಲಿ. ನಾನಾಗಲಿ, ಡಿಕೆ ಶಿವಕುಮಾರ್ ಆಗಲಿ ಭಯ ಪಡುವ ಪ್ರಮೇಯವೇ ಇಲ್ಲ. ಸರ್ಕಾರ ಹಾಗೂ ನಾವು ಇದನ್ನು ಎದುರಿಸುತ್ತೇವೆ ಅಂತ ಸಂಸದ ಡಿಕೆ ಸುರೇಶ್ ಖಡಕ್ಕಾಗಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv