ಚಿಕ್ಕಮಗಳೂರು: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಅವರು ಪೇಪರ್ ಟೈಗರ್ ಆಗಿದ್ದಾರೆ ಎಂದು ಶಾಸಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಿಟಿ ರವಿ, ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಂದ ಸಾಲಮನ್ನಾ ಕುರಿತು ಆದೇಶ ಹೊರಡಿಸಬೇಕು. ರೈತರ ಸಾಲಕ್ಕೆ ಸರ್ಕಾರವೇ ಜವಾಬ್ದಾರಿ ಆಗಿರಲಿದೆ ಎಂದು ಸರ್ಕಾರ ಬ್ಯಾಂಕುಗಳಿಗೆ ತಿಳಿಸಬೇಕು. ಆಗ ಮಾತ್ರ ಬ್ಯಾಂಕುಗಳು ರೈತರಿಗೆ ಸಾಲದ ನೋಟಿಸ್ ನೀಡದಂತೆ ಮಾಡಬಹುದು. ಸರ್ಕಾರ ಸಾಲಮನ್ನಾ ಹೇಳಿಕೆ ನೀಡಿದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಬೇಕು. ಆದರೆ ಈ ವಿಚಾರದಲ್ಲಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಪೇಪರ್ ಟೈಗರ್ ಆಗಿದ್ದಾರೆ ಎಂದರು.
ಇದೇ ವೇಳೆ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದ ಅವರು, ಟಿಪ್ಪು ಇವರ ಅಪ್ಪನ, ತಾತನ ಅಥವಾ ಮುತ್ತಾತನಾ? ಟಿಪ್ಪು ಜಯಂತಿ ಯಾಕೆ? ಇದಕ್ಕೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಮಾಡಿದ ತಪ್ಪನ್ನ ಮೈತ್ರಿ ಸರ್ಕಾರವೂ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಯಾವುದೇ ಅನಾಹುತ ಸಂಭವಿಸಿದರು ಸರ್ಕಾರವೇ ಹೊಣೆಯಾಗಬೇಕು. ಸಮ್ಮಿಶ್ರ ಸರ್ಕಾರ ಈ ನಡೆಗೆ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಟಿಪ್ಪು ಕನ್ನಡ ವಿರೋಧಿಯಾಗಿದ್ದು, ಆಡಳಿತ ಭಾಷೆಯನ್ನು ಪರ್ಷಿಯನ್ ಭಾಷೆಗೆ ಬದಲಾವಣೆ ಮಾಡಿದ್ದ. ರಾಜ್ಯದ ಹಲವು ಜಿಲ್ಲೆಗಳ ಹೆಸರನ್ನು ಬದಲಾಯಿಸಿದ ಕೀರ್ತಿ ಟಿಪ್ಪುನದ್ದು. ಅಕ್ರಮಣ ಮಾಡಿದವರ ಜಯಂತಿ ನಾಡಿಗೆ ಒಳ್ಳೆಯ ಬೆಳೆವಣಿಗೆಯಲ್ಲ. ಕೇವಲ ಮತಗಳ ಆಸೆಗೆ ಬಾಬರ್, ಬಿನ್ ಲಾಡೆನ್ ಆಚರಣೆ ಮಾಡಿದರೂ ಆಚ್ಚರ್ಯವಿಲ್ಲ ಎಂದು ಆರೋಪಿಸಿದ ಸಿಟಿ ರವಿ ಅವರು ಭಾವೈಕ್ಯತೆಯ ಉದ್ದೇಶದಿಂದ ಶರೀಫ್ ರ ಜಯಂತಿ ಆಚರಿಸಲಿ ಎಂಬ ಸಲಹೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv