ಚಿತ್ರದುರ್ಗ: ವಿಶ್ವದೆಲ್ಲೆಡೆ ತಾಂಡವವಾಡುತ್ತಿರುವ ಕೊರೊನಾ ಭೀತಿಯಿಂದಾಗಿ ಎಂಜಿನಿಯರಿಂಗ್ ವರನೊಬ್ಬ ಬ್ಯಾರಿಕೇಡ್ ನಡುವೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ನಿವಾಸಿ ಅಮರೇಶ್, ಸಂಬಂಧಿಗಳ ಸಮ್ಮುಖವಿಲ್ಲದೇ ಸ್ವಾತಿ ಜೊತೆ ಬ್ಯಾರಿಕೇಡ್ ನಡುವೆ ಮದುವೆಯಾಗಿದ್ದಾರೆ. ವರ ಅಮರೇಶ್ ಕೆನಡಾದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ವಾರದ ಹಿಂದೆಯೇ ಕೆನಡಾದಿಂದ ಆಗಮಿಸಿದ್ದು, ಅದ್ಧೂರಿಯಾಗಿ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ರಾಂಪುರದಲ್ಲಿ ಇಂದು ವಿವಾಹ ಇರುವ ಮಾಹಿತಿ ತಿಳಿದ ಜಿಲ್ಲಾಡಳಿತ ಜಾಗೃತಿ ವಹಿಸಿದ್ದು, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಹೆಚ್ಚು ಜನರನ್ನು ಸೇರಿಸದಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿರುವ ಅಮರೇಶ್ ಸರಳವಾಗಿ ವಿವಾಹವಾಗುವ ಮೂಲಕ ಕೊರೊನಾ ಜಾಗೃತಿಗೆ ಸಹಕರಿಸಿದ್ದಾರೆ.
ಮದುವೆಯಲ್ಲಿ ಜನಸಂದಣಿ ಸೇರದಂತೆ ಅಧಿಕಾರಿಗಳ ಸೂಚನೆ ನೀಡಿದ್ದರು. ಹೀಗಾಗಿ ಜನರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಬ್ಯಾರಿಕೇಡ್ ಕೂಡ ಹಾಕಲಾಗಿತ್ತು. ಮೊದಲೇ ಆರೋಗ್ಯ ಅಧಿಕಾರಿಗಳ ಹೇಳಿದ್ದ ಪರಿಣಾಮ ಅಧಿಕಾರಿಗಳ ಸೂಚನೆಯನ್ನು ನೂತನ ವಧು-ವರರು ಪಾಲಿಸಿದ್ದಾರೆ. ಹೆಚ್ಚು ಸಂಬಂಧಕರನ್ನು ಸೇರಿಸದೆ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ.
ವರನಾದ ಅಮರೇಶ್ ಒಂದು ವಾರದ ಹಿಂದೆಯೇ ಕೆನಡಾದಿಂದ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಯಾವುದೇ ಪರೀಕ್ಷೆಗೂ ಈ ಮೊದಲು ಒಳಪಡಿಸಿರಲಿಲ್ಲ. ಆದರೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅಮರೇಶ್ಗೆ ಕೊರೊನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಿಹೆಚ್ಓ ಡಾಕ್ಟರ್ ಪಾಲಾಕ್ಷ ಸ್ಪಷ್ಟಪಡಿಸಿದ್ದಾರೆ.