ರಾಯಚೂರು: ಕೊರೊನಾ ಮಹಾಮಾರಿ ತಲ್ಲಣ ಉಂಟು ಮಾಡಿದ್ದು ಎಷ್ಟೇ ಕಠೀಣ ನಿರ್ಧಾರ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದ್ದಾರೆ. ಇಷ್ಟಾದರೂ ಬುದ್ಧಿ ಕಲಿಯದ ಜನ ಮಾತ್ರ ಆಹಾರ ಕಿಟ್ಗಾಗಿ ಮುಗಿಬಿದ್ದಿದ್ದಾರೆ.
ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಆಹಾರ ಕಿಟ್ಗಾಗಿ ಜನ ನೂಕುನುಗ್ಗಲು ಮಾಡಿ ಕಿತ್ತಾಡಿಕೊಂಡಿದ್ದಾರೆ. ಇದರಿಂದಾಗಿ ಆಹಾರ ಕಿಟ್ ವಿತರಣೆಯನ್ನೇ ನಿಲ್ಲಿಸಲಾಯಿತು.
- Advertisement 2
- Advertisement 3
ಕೆಲ ದಾನಿಗಳು ನಗರದ ಎಪಿಎಂಸಿಯಲ್ಲಿ ಹಮಾಲರು ಸೇರಿ 1,500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದರು. ಆದರೆ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದ ಹಮಾಲರು ಹಾಗೂ ಅವರ ಕುಟುಂಬ ಆಹಾರ ಕಿಟ್ಗಾಗಿ ನೂಕುನುಗ್ಗಲು ಮಾಡಿದರು. ಕಿಟ್ ಪಡೆಯಲು ಮಹಿಳೆಯರು ಹಾಗೂ ಪುರುಷರು ಗುಂಪು ಸೇರಿ ಸಾಮಾಜಿಕ ಅಂತರವನ್ನೇ ಮರೆತರು. ಎಪಿಎಂಸಿ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಆಹಾರ ಕಿಟ್ ಗಾಗಿ ಕಿತ್ತಾಡಿದರು. ಇದರಿಂದಾಗಿ ಕೆಲಕಾಲ ಆಹಾರ ವಿತರಣೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು.