ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅನ್ನೋದು ಕೇವಲ ಜನಸಾಮಾನ್ಯರಿಗೆ ಮಾತ್ರನಾ? ದೊಡ್ಡವರು ಅನ್ನಿಸಿಕೊಂಡಿರುವ ಜನಪ್ರತಿನಿಧಿಗಳಿಗೆ ನಿಯಮ ಅನ್ವಯಿಸಲ್ವಾ? ಹಬ್ಬಗಳಿಗೆ ಮಾತ್ರ ರೂಲ್ಸಾ? ಬಿಜೆಪಿಯ ಜನಾರ್ಶೀವಾದ ಯಾತ್ರೆಗೆ ಇಲ್ವಾ? ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ಹಬ್ಬದ ಸಂದರ್ಭದಲ್ಲಿ ಬಡವರು, ಬದುಕು ಕಟ್ಟಿಕೊಳ್ಳುವವರ ಮಾಸ್ಕ್ ಮೂಗಿಂದ ಸ್ವಲ್ಪ ಜಾರಿದ್ದರೂ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸೋ ಸರ್ಕಾರ, ಎಲ್ಲಾ ಗೊತ್ತಿದ್ದೂ ಜನರನ್ನು ಗುಡ್ಡೆ ಹಾಕಿಕೊಂಡು ಬೃಹತ್ ಕಾರ್ಯಕ್ರಮ ನಡೆಸಿ, ಮೆರವಣಿಗೆ ನಡೆಸುವ ರಾಜಕಾರಣಿಗಳಿಗೆ ಮಾತ್ರ ದಂಡ ಹಾಕದೆ ಶ್ರೀರಕ್ಷೆಯಾಗಿ ನಿಂತಿದೆ. ಬೊಮ್ಮಾಯಿ ಸರ್ಕಾರದ ದ್ವಂದ್ವ ನೀತಿಗೆ ಜನಸಾಮಾನ್ಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬೂದಿ ಕೊಟ್ಟ ಬಿಜೆಪಿಗೆ ಜನರ ಆಶೀರ್ವಾದ ಬೇಕಾ..?: ಡಿಕೆಶಿ ವ್ಯಂಗ್ಯ
ಜನರಿಗಷ್ಟೇ ರೂಲ್ಸಾ..!?
ಬಿಜೆಪಿ ಜನಾರ್ಶೀವಾದ ಯಾತ್ರೆಯಲ್ಲಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ರೂಲ್ಸ್ ಅಂದ್ರೆನೇ ಅಲರ್ಜಿ ಅನ್ನಿಸುತ್ತಿದೆ. ಯಾಕಂದ್ರೆ ನಿನ್ನೆ ಯಾದಗಿರಿಯಲ್ಲಿ ಗುಂಡಿನ ಸ್ವಾಗತ ಸಿಕ್ಕಿತ್ತು. ಬಳಿಕ ನಡೆದ ಬಹುತೇಕ ಕಾರ್ಯಕ್ರಮಗಳಲ್ಲಿ ಜನಜಾತ್ರೆ ಇತ್ತು. ನೈಟ್ಕರ್ಫ್ಯೂಗೂ ಡೋಂಟ್ ಕೇರ್ ಅಂದಿದ್ದು, ರಾತ್ರಿ 11.30ರವರೆಗೂ ಯಾತ್ರೆ ನಡೆಸಿದ್ದಾರೆ. ಆದರೆ ಪೊಲೀಸರು ಕಣ್ಮುಚ್ಚಿಕೊಂಡಿದ್ದರು. ಇವತ್ತು ಕೂಡ ಬಳ್ಳಾರಿ, ಕೊಪ್ಪಳದಲ್ಲಿ ಜನಾಶೀರ್ವಾದ ಯಾತ್ರೆ ವೇಳೆ ರೂಲ್ಸ್ ಬ್ರೇಕ್ ಆಗಿತ್ತು. ಎಲ್ಲೂ ನಿಯಮಗಳು ಪಾಲನೆ ಆಗಲಿಲ್ಲ.
ರಾಯಚೂರಲ್ಲೂ ನಿನ್ನೆ ಭಗವಂತ ಖೂಬಾ ಜನಾಶೀರ್ವಾದ ಕಾರ್ಯಕ್ರಮದಲ್ಲಿ ನೈಟ್ ಕರ್ಫ್ಯೂ ಉಲ್ಲಂಘನೆ ಆಗಿತ್ತು. ರಾತ್ರಿ 11 ಗಂಟೆವರೆಗೆ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಆಯೋಜಕರ ಮೇಲೆ ಕೇಸ್ ದಾಖಲಿಸುವ ಬದಲಿಗೆ ವೀರಶೈವ ಕಲ್ಯಾಣ ಮಂಟಪದ ಮಾಲೀಕರ ಮೇಲೆ ಮಾತ್ರ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ಕಲಬರುಗಿಯಲ್ಲಿ ಬ್ರಹ್ಮಪುರದ ಪೊಲೀಸರು ಸಚಿವರನ್ನು ಬಿಟ್ಟು ಉಳಿದವರ ಮೇಲೆ ಕೇಸ್ ಹಾಕಿದ್ದಾರೆ. ಇದನ್ನೂ ಓದಿ: ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್ಬಾಲ್ ಆಟಗಾರ
ನಾರಾಯಣಸ್ವಾಮಿ ರೂಲ್ಸ್ ಬ್ರೇಕ್
ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಕೂಡ ರಾಜ್ಯಕ್ಕೆ ಬಂದಾಗಿನಿಂದಲೂ ರೂಲ್ಸ್ ಫಾಲೋ ಮಾಡುತ್ತಿಲ್ಲ. ಬೆಂಗಳೂರಿನ ಏರ್ಪೋರ್ಟ್, ನಿನ್ನೆ ಚಿತ್ರದುರ್ಗ, ದಾವಣಗೆರೆಯಲ್ಲಿ ತಾವು ಎಲ್ಲೆಲ್ಲಿಗೆ ಹೋಗಿದ್ದರೋ ಅಲ್ಲೆಲ್ಲಾ ನಿಯಮಗಳ ಉಲ್ಲಂಘನೆ ಆಗಿದೆ. ಆದರೆ ಸರ್ಕಾರ, ಪೊಲೀಸ್ ಇಲಾಖೆ ಮಾತ್ರ ಕಂಡೂ ಕಾಣದಂತೆ ಕೂತಿದೆ.
ಶೋಭಾ ಕರಂದ್ಲಾಜೆ ರೂಲ್ಸ್ ಬ್ರೇಕ್
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಹೋದ ಕಡೆಯಲೆಲ್ಲಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಮಂಡ್ಯ, ಚಿಕ್ಕಮಗಳೂರು, ಉಡುಪಿ ಸೇರಿ, ಶೋಭಾ ಕರಂದ್ಲಾಜೆ ಕಾಲಿಟ್ಟ ಕಡೆಯಲೆಲ್ಲಾ ನಿಯಮ ಪಾಲನೆ ಆಗಿಲ್ಲ. ಇಷ್ಟಾದರೂ ಜನಪ್ರತಿನಿಧಿಗಳಿಗೆ ದಂಡ ವಿಧಿಸೋ ಕೆಲಸವನ್ನು ಯಾರೂ ಮಾಡಿಲ್ಲ. ಈ ನಡೆಯ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ. ಇದನ್ನೂ ಓದಿ: ವೆಹಿಕಲ್ ಟೋಯಿಂಗ್ ಹುಡುಗರನ್ನು ಅಟ್ಟಾಡಿಸಿ ಹೊಡೆದ ಸಾರ್ವಜನಿಕರು