ಚಾಮರಾಜನಗರ: ಹಣಬಲ, ಜಾತಿಬಲ ಬಳಸಿ ಕಾಂಗ್ರೆಸ್ ಚುನಾವಣೆ ಗೆಲ್ತಿತ್ತು. ಆದರೆ ಈಗ ಅವರಿಗೆ ಅಡ್ರೆಸ್ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 26 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಲ್ಪ ಸ್ವಲ್ಪ ಉಸಿರಾಡುತ್ತಿದೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಟ 15-16 ಸೀಟ್ ಗೆದ್ದೇ ಗೆಲ್ತೀವಿ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಗುರ ಮಾತುಗಳಿಗೆ ಉತ್ತರ ಕೊಡುವುದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಚಿನ್ನದ ಹುಡುಗನಿಗೆ ಮೋದಿ ಚಪ್ಪಾಳೆ
ನಾನು ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಎಲ್ಲರೂ ತಿಳಿದುಕೊಂಡಿದ್ದರು. ನಾನು ಮನೆಯಲ್ಲಿ ಕುಳಿತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸೀಟ್ ಗೆಲ್ಲೀಸ್ತೀನಿ. ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪಕ್ಷವನ್ನ ಸಂಘಟನೆ ಮಾಡುತ್ತೇನೆ. ಮುಂದೇನೂ ಮನೆ ಸೇರಲ್ಲ ಎಂದು ಹೇಳಿದರು.
ಕಾರ್ಯಕರ್ತರ ಉತ್ಸಾಹ ನೋಡಿ ಸುಸ್ತಾಗಿದೆ. ಶಿವಮೊಗ್ಗದಲ್ಲಿ ಭಾಷಣ ಮಾಡಿದ ಹಾಗೇ ಅನಿಸುತ್ತಿದೆ. ಸಚಿವ ಸೋಮಶೇಖರ್ ಒಳ್ಳೆಯ ಕೆಲಸಗಳನ್ನ ಮಾಡುತ್ತಿದ್ದಾರೆ. ರಘು ಕೌಟಿಲ್ಯ ವಿಜಯೋತ್ಸವಕ್ಕೆ ಮತ್ತೆ ನಾನು ಚಾಮರಾಜನಗರಕ್ಕೆ ಬರುತ್ತೇನೆ ಎಂದು ಜನರನ್ನು ಮತ ನೀಡುವಂತೆ ಪ್ರೋತ್ಸಾಹಿಸಿದರು.