ಬೆಂಗಳೂರು: ಎಐಸಿಸಿ ಐಟಿ ಸೆಲ್ ಮುಖ್ಯಸ್ಥೆ ಆಗಿರುವ ನಟಿ ರಮ್ಯಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆ ಮಾಡದೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಸುರೇಶ್ ಕುಮಾರ್ ಅವರು, ನಟಿ ರಮ್ಯಾ ಸೇರಿದಂತೆ ಎಐಸಿಸಿ ಐಟಿ ವಿಭಾಗದ ಪ್ರಮುಖರು ಮತದಾನಕ್ಕೆ ಗೈರಾಗಿದ್ದು, ಕೊನೆಗೂ ಮತದಾನಕ್ಕೆ ಬರದೆ ರಮ್ಯಾ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಎಂದು ಏ.18 ರಂದು ಟ್ವೀಟ್ ಮಾಡಿದ್ದಾರೆ. ಏ.19 ಮತ್ತೊಂದು ಟ್ವೀಟ್ ಮಾಡಿ ಅನೇಕ ಸಂಸ್ಥೆಗಳಲ್ಲಿ ಮೂರು ಬಾರಿ ಸಂಸ್ಥೆಗೆ ಹಾಜರಾಗದಿದ್ದರೆ ಅಂತಹವರ ಹೆಸರನ್ನು ತೆಗೆದು ಹಾಕಲಾಗುತ್ತದೆ. ರಮ್ಯಾ ಅವರ ಹೆಸರೂ ತೆಗೆಸಿ ಹಾಕಿಕೊಳ್ಳುವ ಅರ್ಹತೆ ಸಂಪಾದಿಸಿದೆ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಅನೇಕ ಸಂಸ್ಥೆಗಳಲ್ಲಿ ಮೂರು ಬಾರಿ ಸಭೆಗೆ ಹಾಜರಾಗದಿದ್ದರೆ, ಅಂತಹವರ ಹೆಸರನ್ನು ತೆಗೆದುಹಾಕಲಾಗುತ್ತದೆ. @divyaspandan ರವರ ಹೆಸರೂ ತೆಗೆಸಿ ಹಾಕಿಕೊಳ್ಳುವ ಅರ್ಹತೆ ಸಂಪಾದಿಸಿದೆ ಅಲ್ಲವೇ?
— S.Suresh Kumar (@nimmasuresh) April 19, 2019
ಇತ್ತ ಮತದಾನದ ದಿನವೂ ಕೂಡ ನಟಿ ರಮ್ಯಾರನ್ನು ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಮಂಡ್ಯದಲ್ಲಿ ನಿಖಿಲ್ ಗೆ ವೋಟು ಹಾಕೋದು ಯಾಕೆ ಅಂತಾ ರಮ್ಯಾ ಊರಿಗೆ ಬಂದಿಲ್ಲ ಅಂತಾ ಕಾಲೆಳೆದಿದ್ದರು. ಅಲ್ಲದೇ ಮಂಡ್ಯದಲ್ಲಿ ಕಾಂಗ್ರೆಸ್ ಇಲ್ಲ ಅಲ್ವಾ ಅದಕ್ಕೆ ಬಂದಿಲ್ಲ ಎಂದು ಕೆಲ ಮಂದಿ ವ್ಯಂಗ್ಯವಾಡಿದ್ದರು.
ಕೊನೆಗೂ ಮತದಾನಕ್ಕೆ ಬರದೆ ವೋಟಿಂಗ್ ಗೆ ಗೈರಾಗಿ ಹ್ಯಾಟ್ರಿಕ್ ಸಾಧಿಸಿದ ನಟಿ ರಮ್ಯ!! ಇವರು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಪ್ರಮುಖರು!
— S.Suresh Kumar (@nimmasuresh) April 19, 2019
ರಮ್ಯಾ ಅವರು ವಿಧಾನಸಭಾ ಚುನಾವಣೆ, ಮಂಡ್ಯ ಲೋಕಸಭಾ ಉಪಚುನಾವಣೆ ಸೇರಿದಂತೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಿರಲಿಲ್ಲ. ನಟ ಅಂಬರೀಶ್ ಅವರ ಸಾವಿನ ದಿನವೂ ಕೂಡ ಅವರ ಅಂತಿಮ ದರ್ಶನ ಪಡೆಯಲು ಕೂಡ ಬಂದಿರಲಿಲ್ಲ. ಈ ವೇಳೆ ಅನಾರೋಗ್ಯ ಸಮಸ್ಯೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಕಳೆದ ತಿಂಗಳು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳಲು ಆಗಮಿಸಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ತಮಿಳುನಾಡಿನ ವಯನಾಡಿನಲ್ಲಿ ರಾಹುಲ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ವಯನಾಡಿನ ಸೋಷಿಯಲ್ ಮೀಡಿಯಾ ಟೀಂ ಜೊತೆಗೆ ಫುಲ್ ಬ್ಯುಸಿಯಾಗಿ ರಾಹುಲ್ ಪರ ಅಲೆ ಸೃಷ್ಟಿಸಲು ಕಾರ್ಯ ನಿರ್ವಹಿಸಿದ್ದರು.