ಬೆಂಗಳೂರು: ಸದನದ ವಿಶ್ವಾಸ ಮತಯಾಚನೆ ಸರ್ಕಾರ ಮತ್ತು ಅಳಿವು ಉಳಿವಿನ ಪ್ರಶ್ನೆ ಆಗಿದ್ದು, ಪಕ್ಷದ ಅತೃಪ್ತ ಶಾಸಕರ ಅರ್ಜಿಗೆ ಪೂರಕವಾಗಿ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿತ್ತು. ನಾಳೆಯ ಪ್ರಕರಣದ ತೀರ್ಪು ಬರಲಿದ್ದು, ಇಂತಹ ಸಂದರ್ಭದಲ್ಲಿ ವಿಶ್ವಾಸಮತಕ್ಕೆ ಹಾಕುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದ ಆರಂಭದ ಸಂದರ್ಭದಲ್ಲಿ ಸಿಎಂ ವಿಶ್ವಾಸಮತ ಮಾಡುವುದಾಗಿ ಹೇಳಿದ್ದರು. ಆದರೆ ಇದರ ಮೇಲೆ ನಾವು ಕ್ರಿಯಾಲೋಪವನ್ನು ಎತ್ತಿದ್ದೇವು. ಅಲ್ಲದೇ 10ನೇ ಶೆಡ್ಯೂಲ್ ಪ್ರಕಾರ ವಿಪ್ ಜಾರಿ ಮಾಡುವ ಶಕ್ತಿಯನ್ನು ಕಸಿದುಕೊಂಡಿಲ್ಲ ಎಂದು ಸ್ಪೀಕರ್ ಅವರ ಸ್ಪಷ್ಟಪಡಿಸಿದ್ದಾರೆ. ಸ್ಪೀಕರ್ ಅವರು ಒಳ್ಳೆಯ ರೂಲಿಂಗ್ ಕೊಟ್ಟಿದ್ದಾರೆ. ಹೀಗಾಗಿ ನ್ಯಾಯಾಲಯದಲ್ಲಿ ನಮ್ಮ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ. ಇದು ಸರ್ಕಾರ ಮತ್ತು ಅಳಿವು ಉಳಿವಿನ ಪ್ರಶ್ನೆ ಆಗಿದ್ದು, ಈ ಸಂದರ್ಭದಲ್ಲಿ ವಿಶ್ವಾಸ ಮತಯಾಚನೆಗೆ ಹಾಕುವುದು ಸರಿಯಲ್ಲ ಎಂದರು.
ರಾಜ್ಯದ 224 ಕ್ಷೇತ್ರಗಳ ಶಾಸಕರಿಗೆ ಇದು ಮನವರಿಕೆಯಾಗಬೇಕು, ವಿಪ್ ವಿಚಾರವಾಗಿ ಎಲ್ಲ ಶಾಸಕರಿಗೆ ಸ್ಪಷ್ಟತೆ ಸಿಗಬೇಕು. ಆದರೆ ಇಂದೇ ಮತಕ್ಕೆ ಹಾಕಬೇಕು ಎಂದು ನಾವು ವಿಶ್ವಾಸಮತಕ್ಕೆ ಒಪ್ಪಿಕೊಂಡಿದ್ದೆವು. ಆದರೆ ಇನ್ನೂ ಸಾಕಷ್ಟು ಚರ್ಚೆ ಬಾಕಿ ಇದೆ. ಹೀಗಾಗಿ ನಾಳೆಯೂ ಸುಪ್ರಿಂ ಕೋರ್ಟ್ ನ ತೀರ್ಪು ಬರಲಿದೆ. ಈ ಸಂದರ್ಭದಲ್ಲಿ ಮತಕ್ಕೆ ಹಾಕುವುದು ಸರಿಯಲ್ಲ. ಚರ್ಚೆಯನ್ನು ನಾವು ಮುಂದುವರಿಸಲೇ ಬೇಕಾಗುತ್ತದೆ ಎನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ಸಿಗೆ ಸಿಎಂ ಸ್ಥಾನ ನೀಡಿಕೆ ವಿಚಾರ ಪ್ರತಿಕ್ರಿಯೆ ನೀಡಿ, ಇದು ಸತ್ಯಕ್ಕೆ ದೂರವಾದ ಮಾತು. ಇದುವರೆಗೂ ಆ ರೀತಿ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಅತೃಪ್ತರಿಗೆ ಸಲಹೆ ನೀಡಿ, ನಿಮ್ಮನ್ನ ಬಿಜೆಪಿ ನಡು ರಸ್ತೆಯಲ್ಲಿ ಬಿಡಲಿದೆ. ಆದ್ದರಿಂದ ಸ್ಪೀಕರ್ ರೂಲಿಂಗ್ ಅರ್ಥ ಮಾಡಿಕೊಳ್ಳಿ. ನಿಮ್ಮ ಭವಿಷ್ಯವನ್ನ ಹಾಳು ಮಾಡಿಕೊಳ್ಳಬೇಡಿ ಎಂದರು.