ಬೆಂಗಳೂರು: ಚನ್ನಪಟ್ಟಣಕ್ಕೆ ಡಿಕೆ ಸುರೇಶ್ (DK Suresh) ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಒಂದು ವೇಳೆ ಆಗದೇ ಇದ್ದರೆ ಮಾತ್ರ ಬೇರೆಯವರು ಸ್ಪರ್ಧೆ ಮಾಡುವ ಸಾಧ್ಯತೆಯಿದೆ.
ಭಾನುವಾರ ರಾತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಉಪಚುನಾವಣೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ನಡೆದಿದೆ. ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಚನ್ನಪಟ್ಟಣಕ್ಕೆ (Channapatna) ಡಿಕೆ ಸುರೇಶ್ 99% ಸ್ಪರ್ಧೆ ಮಾಡುತ್ತಾರೆ. ಒಂದು ವೇಳೆ ಕಣದಿಂದ ಹಿಂದಕ್ಕೆ ಸರಿದರೆ ಮಾತ್ರ ಬೇರೆಯವರು ಸ್ಪರ್ಧೆ ಮಾಡುತ್ತಾರೆ ಎಂದು ಸಭೆಯಲ್ಲಿ ಸಿಎಂ, ಡಿಸಿಎಂ ತಿಳಿಸಿದ್ದಾರೆ.
ಸಂಡೂರು ಕ್ಷೇತ್ರಕ್ಕೆ ಬಳ್ಳಾರಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ (Annapurna) ಅವರಿಗೆ ಟಿಕೆಟ್ ಫೈನಲ್ ಎಂಬ ಮಾಹಿತಿ ನೀಡಲಾಗಿದೆ. ಮೂರು ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಎರಡು ದಿನದಲ್ಲಿ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ | ಚನ್ನಪಟ್ಟಣಕ್ಕೆ ಸಚಿವ ಚೆಲುವರಾಯಸ್ವಾಮಿ ಉಸ್ತುವಾರಿ
ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯ ದಾಳಿಯ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕು. ಜಾತಿ ಸಮೀಕ್ಷೆ, ಒಳ ಮೀಸಲಾತಿ, ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತಂತೆ ಸಮುದಾಯ ನಾಯಕರ ಜೊತೆ ಪ್ರತ್ಯೇಕ ಸಭೆ ನಡೆಸುತ್ತೇನೆ. ಮೂರೂ ಕ್ಷೇತ್ರಗಳ ಉಪಚುನಾವಣೆ ಬಹಳ ಮಹತ್ವದ್ದಾಗಿದ್ದು ನಾವು ಮೂರನ್ನೂ ಗೆಲ್ಲಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ತಾವು ವಹಿಸಿಕೊಂಡ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇವೆ.ಅದರಂತೆ ಎಲ್ಲರೂ ವಹಿಸಿದ ಜಬಾಬ್ದಾರಿ ನಿಭಾಯಿಸಬೇಕು ಎಂದು ಸೂಚಿಸಿದ್ದಾರೆ.
ಜಾತಿ ಜನಗಣತಿ ಬಗ್ಗೆ ಸದ್ಯ ಯಾವುದೇ ಹೇಳಿಕೆ ನೀಡಬೇಡಿ. ಉಪ ಚುನಾವಣೆ ಮುಗಿಯವರೆಗೆ ಸರ್ಕಾರದ ಮುಂದೆ ಆ ಪ್ರಸ್ತಾಪ ಇಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಮಾಡುವುದಿಲ್ಲ. ಲಿಂಗಾಯತ ನಾಯಕರ ಸಭೆ ನಡೆಸಿದರೆ ನಡೆಸಲಿ ಅವರ ಅಭಿಪ್ರಾಯ ಅವರು ಹೇಳಲಿ. ಸರ್ಕಾರದ ಕಡೆಯಿಂದಲೂ ಒಕ್ಕಲಿಗ ಹಾಗೂ ಲಿಂಗಾಯತ ಎರಡೂ ಸಮುದಾಯದ ಶಾಸಕರ ಸಭೆ ನಡೆಸುವುದಾಗಿ ಸಿಎಂ ಈ ವೇಳೆ ಭರವಸೆ ನೀಡಿದ್ದಾರೆ.