ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಶಾಸಕ ಬಿ.ಸಿ ಪಾಟೀಲ್ ಮರಳಿ ಬರುವಂತೆ ಆಗ್ರಹಿಸಿ ಹಿರೇಕೆರೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪಾಟೀಲ್ ಮರಳಿ ಬನ್ನಿ ಎಂದು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಬಿ.ಸಿ ಪಾಟೀಲ್ ಅವರು ಮುಂಬೈಯಿಂದ ಮರಳಿ ಬಂದು ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ. ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ಕೈ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ಆಗಿದೆ. ಈ ಬಾರಿ ಸಚಿವ ಸ್ಥಾನ ಖಚಿತವಾಗಿ ಕಾಂಗ್ರೆಸ್ ಪಕ್ಷ ನೀಡುತ್ತದೆ, ಬನ್ನಿ ಎಂದು ಮುಖಂಡರು ಕರೆಯುತ್ತಿದ್ದಾರೆ. ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾಧ್ಯಕ್ಷ ಎಂ.ಎಂ ಹಿರೇಮಠ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಬಿ.ಸಿ ಪಾಟೀಲ್ ಅವರು ಉಳಿದ ಅತೃಪ್ತ ಶಾಸಕರ ಜೊತೆ ಮುಂಬೈನ ಹೋಟೆಲಿನಲ್ಲಿ ತಂಗಿದ್ದಾರೆ. ಬಿ.ಸಿ ಪಾಟೀಲ್ ಅವರು ಶುಕ್ರವಾರ ಶಾಸಕರಾದ ಬೈರತಿ ಬಸವರಾಜ್, ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಜೊತೆ ಮುಂಬೈನ ಬಾಂದ್ರದಲ್ಲಿರುವ ಸಿದ್ಧಿವಿನಾಯಕ ದರ್ಶನ ಪಡೆದು ಸಂಕಷ್ಟ ನಿವಾರಿಸಲು ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ಅವರು ಶಿರಡಿ ಹಾಗೂ ಐತಿಹಾಸಿಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.