ಹಾಸನ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ತಾಳೆಗರಿ ಮೂಲಕ ಭವಿಷ್ಯ ನುಡಿಯುವ ಶ್ರೀಗಳು ಬುಧವಾರ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕವಿದ್ದು, ನವೆಂಬರ್ ತಿಂಗಳವರೆಗೂ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿರುತ್ತದೆ. ಬೆಳಗಾವಿ ಸಹೋದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಅಣ್ಣ ಹುಟ್ಟಿಕೊಳ್ಳುತ್ತಾನೆ ನೋಡುತ್ತಿರಿ ಎಂದು ಹೇಳಿದ್ದಾರೆ.
ದೇಶದಲ್ಲಿ ಪ್ರಾಕೃತಿಕ ವಿಕೋಪಗಳು ಇನ್ನೂ ಹೆಚ್ಚಾಗಲಿವೆ. ಭೂ-ಕಂಪನದ ಹೊಡೆತಕ್ಕೆ ದೊಡ್ಡ ದೊಡ್ಡ ನಗರಗಳು ತತ್ತರಿಸುತ್ತವೆ. ಸಾವು-ನೋವುಗಳ ಸರಣಿ ಹೆಚ್ಚಾಗಲಿದೆ. ರಾಜ್ಯದಲ್ಲಿಯೂ ಮಳೆಯ ಆರ್ಭಟ ಮುಂದವರಿಯಲಿದೆ ಎಂದು ಭವಿಷ್ಯ ನುಡಿದರು.
ಈ ಮೊದಲು ಖಗ್ರಾಸ ಚಂದ್ರಗ್ರಹಣದ ವೇಳೆ `ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು. ರಾಜಕೀಯ ವಿಪ್ಲವವಾಗಲಿದೆ’ ಎಂದು ಒಗಟಾಗಿ ತಿಳಿಸಿದ್ದರು. ಅಂದರೆ `ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರಾ ಎನ್ನುವ ವಿಶ್ಲೇಷಣೆ ಕೇಳಿಬಂದಿತ್ತು. ಅಲ್ಲದೇ ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಕೋಡಿ ಶ್ರೀ ಭವಿಷ್ಯ
ಶ್ರೀಗಳ ಭವಿಷ್ಯದಂತೆ ದೇಶದಲ್ಲಿ ಮಳೆಯ ರೌದ್ರನರ್ತನ ಹೆಚ್ಚಾಗಿ ಅನೇಕ ಸಾವು-ನೋವುಗಳು ಸಂಭವಿಸಿದ್ದವು. ರಾಜ್ಯದಲ್ಲಿಯೂ ಸಹ ಕಂಡು ಕೇಳರಿಯದ ಭೀಕರ ಮಳೆಗೆ ಕೊಡುಗು ಜಿಲ್ಲೆ ತತ್ತರಿಸಿ ಹೋಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv