ಚಿಕ್ಕಮಗಳೂರು: ಲೋಕಸಭಾ (Loksabha Elections 2024) ಅಖಾಡ ರಂಗೇರಿದೆ. ಬಿಜೆಪಿ ಭದ್ರಕೋಟೆ ಚಿಕ್ಕಮಗಳೂರಿನಲ್ಲಿ ಟಿಕೆಟ್ಗಾಗಿ ಕೋಲ್ಡ್ವಾರ್ ಶುರುವಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್ಗಾಗಿ ಶೋಭಾ ಕರಂದ್ಲಾಜೆ ವರ್ಸಸ್ ಸಿಟಿ ರವಿ ( CT Ravi) ಮಧ್ಯೆ ಫೈಟ್ ತಾರಕಕ್ಕೇರಿದ್ದು, ನಾರಿ ಟ್ರಂಪ್ ಕಾರ್ಡ್ ಬಳಕೆಗೆ ಶೋಭಾ ಕರಂದ್ಲಾಜೆ ಮುಂದಾಗಿದ್ದಾರೆ.
ಕಾರ್ಯಕರ್ತರು ಮಾತ್ರ ಶೋಭಕ್ಕನಿಗೆ ಟಿಕೆಟ್ ಕೊಟ್ರೆ ಸೋಲು ಖಚಿತ, ಲಕ್ಷ ನೋಟಾ ವೋಟು ಉಚಿತ ಎಂಬ ಅಭಿಯಾನ ಮುಂದುವರಿಸಿದ್ದಾರೆ. ಕಾರ್ಯಕರ್ತರ ವಿರೋಧದ ಮಧ್ಯೆಯೂ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ (Shobha Karandlaje) ಬೆನ್ನಿಗೆ ನಿಂತು ಪರೋಕ್ಷವಾಗಿ ಅವರೇ ಅಭ್ಯರ್ಥಿ ಎಂದು ಭವಿಷ್ಯ ನುಡಿದಿರೋದು ಬಿಜೆಪಿಯೊಳಗೆ ಮತ್ತೊಂದಿಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಾಲಿ ಸಂಸದರಿಗೆ ಟಿಕೆಟ್ ಇಲ್ಲವೆಂದು ಮೋದಿ, ಅಮಿತ್ ಶಾ ಹೇಳಿಲ್ಲ: ಶೋಭಾ ಕರಂದ್ಲಾಜೆ
ಯಡಿಯೂರಪ್ಪನವರ (BS Yediyurappa) ಆಶೀರ್ವಾದ ಇರೋದ್ರಿಂದ ಟಿಕೆಟ್ ನನಗೇ ಸಿಗುತ್ತೆ ಎಂಬ ಆತ್ಮವಿಶ್ವಾಸದಲ್ಲಿ ಶೋಭಾ ಕರಂದ್ಲಾಜೆ ಇದ್ದಾರೆ. ಆದರೆ ಮಾಜಿ ಸಚಿವ ಸಿಟಿ ರವಿ ಕೂಡ ಟಿಕೆಟ್ಗಾಗಿ ತೀವ್ರ ಕಸರತ್ತು ನಡೆಸ್ತಿದ್ದಾರೆ. ಮನಸ್ಸಿನಲ್ಲಿ ಬಹಳ ಭಾವನೆಗಳಿವೆ. ಎಲ್ಲವನ್ನೂ ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ. ವಿಧಾನಸಭಾ ಚುನಾವಣೆಯಲ್ಲಿ ಯಾರ್ಯಾರು ಏನೇನು ಮಾಡಿದ್ರು ಅನ್ನೋದು ಗೊತ್ತು. ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದ್ರೂ ಲೋಕಸಭೆ ಚುನಾವಣೆ ನಂತರವೇ ಅಂತ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಒಟ್ಟಾರೆ ಲೋಕಸಭಾ ಚುನಾವಣೆಯ ಗುಂಗು ಆರಂಭವಾದಗಿನಿಂದ ಕಾಫಿನಾಡ ಬಿಜೆಪಿ ಮನೆಯಲ್ಲಿ ನಡೆಯುತ್ತಿರೋದನ್ನ ಗಮನಿಸಿದ್ರೆ ಮನೆಯೊಂದು ಮೂರು ಬಾಗಿಲಾದಂತಿದೆ. ಅತ್ತ ಶೋಭಾಗೆ ಟಿಕೆಟ್ ಕೊಡೋದಕ್ಕೆ ಕಾರ್ಯಕರ್ತರು ತೀವ್ರ ವಿರೋಧ ಹೊರಹಾಕ್ತಿದ್ದಾರೆ. 14 ಸಾವಿರ ಮತಗಳ ಅಂತರದಲ್ಲಿ ಐದು ಕ್ಷೇತ್ರ ಕಳ್ಕಂಡ್ವಿ. ಶೋಭಾ ಟಿಕೆಟ್ ಕೊಟ್ರೆ ನೋಟಾ ಹಾಕ್ತೀವಿ ಅಂತಿದ್ದಾರೆ ಕಾರ್ಯಕರ್ತರು. ಇವರ ಈ ರಾಜಕೀಯ ಒಳಜಗಳದಿಂದ ಐದು ಶಾಸಕರನ್ನು ಕಳ್ಕೊಂಡ್ರು. ಹೀಗೆ ಮಾಡ್ಕೊಂಡು ಲೋಕಕ್ಷೇತ್ರವನ್ನೂ ಕಳ್ಕೊಂತಾರ ಅನ್ನೋ ಆತಂಕ ಪ್ರಾಮಾಣಿಕ ಕಾರ್ಯಕರ್ತರದ್ದಾಗಿದೆ.