ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪ ಚಿಕ್ಕಂದಿನಿಂದಲೇ ಆಟ-ಪಾಠದಲ್ಲಿ ಮುಂದಿದ್ದರು. ಆದರೆ ಆಗಿನಿಂದಲೇ ಅವರಿಗೆ ಮುಂಗೋಪ ಹೆಚ್ಚು ಎಂದು ಅವರ ಬಾಲ್ಯದ ಗೆಳೆಯರು ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ.
ಬಿಎಸ್ವೈ ಅವರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದವರಾಗಿದ್ದಾರೆ. ಬೂಕನಕೆರೆ ಗ್ರಾಮದಲ್ಲಿ ಚಿಕ್ಕಂದಿನಿಂದ ಯಡಿಯೂರಪ್ಪ ಜೊತೆ ಆಟವಾಡುತ್ತಾ ಬೆಳೆದ ಅವರ ಸ್ನೇಹಿತರು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರ ಜೊತೆಗಿನ ಒಡನಾಟಗಳನ್ನು ಮೆಲುಕು ಹಾಕುತ್ತಿದ್ದಾರೆ.
ಯಡಿಯೂರಪ್ಪ ಅವರಿಗೆ ಚಿಕ್ಕಂದಿನಿಂದಲೇ ಮುಂಗೋಪ, ಯಾವಾಗಲೂ ನಾನು ಮುಂದು ಅಂತಿದ್ದರು. ಅವರ ಜೊತೆ ಒಡನಾಟ ಚೆನ್ನಾಗಿತ್ತು. ಅವರು ಮುಂದೆ ಬೆಳೆದರು. ಆದರೆ ನಾವು ಊರಲ್ಲೇ ಇದ್ದೇವೆ. ಅವರು ಬಂದು ಮಾತನಾಡಿಸಿದಾಗ ಸಂತೋಷ ಆಗುತ್ತದೆ. ಅವರು ಚೆನ್ನಾಗಿರಲಿ ಎಂದು ಏಳನೇ ತರಗತಿವರೆಗೆ ಜೊತೆಯಲ್ಲೇ ಓದಿದ ಕಿಟ್ಟಪ್ಪ ನೆನಪಿಸಿಕೊಳ್ಳುತ್ತಾರೆ.
ಅವರ ಮತ್ತೊಬ್ಬ ಗೆಳೆಯರಾದ ರಾಮಸ್ವಾಮಿ ಮಾತನಾಡಿ, ಸ್ಕೂಲ್ ಸಮಯದಲ್ಲೇ ಬಿಎಸ್ವೈ ಎಲ್ಲದರಲ್ಲೂ ಮುಂದಿದ್ದರು. ಅವರು ನನ್ನ ಜೊತೆ ಕೊಬ್ಬರಿ ಬೆಲ್ಲ ತಿನ್ನುತ್ತಿದ್ದರು. ಜೊತೆಯಲ್ಲೇ ಆಟ ಆಡುತ್ತಿದ್ದೆವು. ಓದುವುದರಲ್ಲೂ ಮುಂದಿದ್ದರು. ಬಂದಾಗೆಲ್ಲ ಸಿಗುತ್ತಾರೆ, ಮಾತನಾಡಿಸುತ್ತಾರೆ. ಅವರು ಸಿಎಂ ಆಗಿರೋದು ತುಂಬಾ ಖುಷಿ ಅಂತ ಸಂಭ್ರಮಿಸಿದರು.