ಧಾರವಾಡ: ಜಲ್ಲೆಯ ಗಡಿಭಾಗದ ಹಾಗೂ ಧಾರವಾಡ ತಾಲೂಕಿನ ಹುಣಶಿಕುಮರಿ ಗ್ರಾಮದ ಮಕ್ಕಳು ಪ್ರೌಢ ಶಾಲೆಗೆ ಹೋಗಬೇಕಾದರೆ ಪ್ರತಿನಿತ್ಯ 7 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಹುಣಶಿಕುಮರಿ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ. ಬೆಳಗ್ಗೆ 9 ಗಂಟೆ ಹಾಗೂ ಸಂಜೆ 6 ಗಂಟೆ ಬಸ್ಸು ಬಿಟ್ರೆ ಬೇರೆ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಸೈಕಲ್ ಇದ್ದವರು ಸೈಕಲ್ಲಿನ ಮೇಲೆ ಹೋದ್ರೆ, ಉಳಿದವರಿಗೆ ಕಾಲೇ ಗತಿ. ಈ ಗ್ರಾಮದಿಂದ ಪ್ರತಿ ದಿನ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಕೇರಿ ಗ್ರಾಮದ ಶಾಲೆಗೆ ಹೋಗ್ತಾರೆ. 80 ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದ ಮಕ್ಕಳು ಇವಾಗ ವಿದ್ಯಾಭ್ಯಾಸದ ಕಡೆ ತಮ್ಮ ಗಮನ ಹರಿಸುತ್ತಿದ್ದಾರೆ.
ಈ ಗ್ರಾಮ ದಟ್ಟ ಅರಣ್ಯ ಪ್ರದೇಶದಲ್ಲಿದೆ. ದಟ್ಟವಾದ ಅರಣ್ಯದಲ್ಲೇ ಇಲ್ಲಿನ ಮಕ್ಕಳು ಸೈಕಲ್ ಮೂಲಕ ಅಥವಾ ನಡೆದುಕೊಂಡು ಹೋಗಬೇಕು. ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಕಾರ್ಮಿಕ ಸಚಿವ ಹಾಗು ಕ್ಷೇತ್ರದ ಶಾಸಕ ಸಚಿವ ಸಂತೋಷ ಲಾಡ್ ಅವರಿಗೆ ಕೇಳಿದ್ರೆ, ಅರಣ್ಯ ಪ್ರದೇಶ ಇರುವುದರಿಂದ ರಸ್ತೆ ಡಾಂಬರಿಕರಣ ಮಾಡಿಲ್ಲ ಎಂದು ಹೇಳುತ್ತಾರೆ.
ಸದ್ಯ ಗ್ರಾಮದ ರಸ್ತೆ ಆಗದೇ ಇದ್ರೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇನ್ನು ಎಷ್ಟು ದಿನ ಹೀಗೆಯೇ ಎದ್ದು ಬಿದ್ದು ಓಡಾಡಬೇಕೊ ಗೊತ್ತಿಲ್ಲ. ಈ ಜಿಲ್ಲೆಯಲ್ಲಿ ಇಬ್ಬರು ಕ್ಯಾಬಿನೆಟ್ ಸಚಿವರಿದ್ರು ಇಲ್ಲಿ ಕಳಪೆ ರಸ್ತೆಗಳಿರುವುದು ವಿಪರ್ಯಾಸ.