ಬೆಂಗಳೂರು: ಹೋಂ ಕ್ವಾರಂಟೈನ್ ನಲ್ಲಿದ್ದ ಚಿಕ್ಕಬಳ್ಳಾಪು ಜಿಲ್ಲೆಯ ಗೌರಿ ಬಿದನೂರಿನ ಮಹಿಳೆ ಕೊರೊನಾ ವೈರಸ್ ನಿಂದಲೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಮೂಲತಃ ಆಂಧ್ರದ ಹಿಂದೂಪುರ ಮೂಲದ 70 ವರ್ಷದ ಮಹಿಳೆ ಮೆಕ್ಕಾ ಪ್ರವಾಸ ಕೈಗೊಂಡು ಕಳೆದ 9 ದಿನಗಳಿಂದ ಮಗನ ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದರು. ಮಂಗಳವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವು
ಪಬ್ಲಿಕ್ ಟಿವಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಪ್ರತಿಕ್ರಿಯಿಸಿ, ಮೆಕ್ಕಾ ಪ್ರವಾಸದಿಂದ ವಾಪಾಸ್ಸಾಗಿ ಮಗನ ಮನೆಯಲ್ಲಿ ಕ್ವಾರಂಟೈನ್ ಗೆ ಓಳಗಾಗಿದ್ದರು. 70 ವರ್ಷದ ಮಹಿಳೆಗೆ ರಕ್ತದೊತ್ತಡ ಇತ್ತು. ಅಷ್ಟೇ ಅಲ್ಲದೇ ಕಾಲಿಗೆ ಬೇರೆ ಗಾಯ ಮಾಡಿಕೊಂಡಿದ್ದರು. ಇದರ ಜೊತೆ ಹೃದಯದ ಸಮಸ್ಯೆ ಸಹ ಇತ್ತು. ಮಂಗಳವಾರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು ಎಮದು ತಿಳಿಸಿದ್ದರು.