ಚಿಕ್ಕಬಳ್ಳಾಪುರ: ವರದಕ್ಷಿಣೆ ಯಾಕೆ ತರಬೇಕು ಎಂದು ಕೇಳಿದ್ದಕ್ಕೆ ಪತಿಯೊರ್ವ ಪತ್ನಿಗೆ ಬಾಸುಂಡೆ ಬರುವಂತೆ ಬೆಲ್ಟ್ ನಿಂದ ಹೊಡೆದಿರುವ ಪೈಶಾಚಿಕ ಕೃತ್ಯ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ.
ಪತ್ನಿ ಸಿಮ್ರಾನ್ ಹಲ್ಲೆಗೊಳಗಾದಾಕೆ. ಅಬ್ದುಲ್ ರಜಾಕ್ ಹಲ್ಲೆ ಮಾಡಿರುವ ಪಾಪಿ ಪತಿಮಹಾಶಯ. ಅಂದಹಾಗೆ ವೃತ್ತಿಯಲ್ಲಿ ಚಾಲಕನಾಗಿದ್ದ ಅಬ್ದುಲ್ ರಜಾಕ್ 3 ವರ್ಷಗಳ ಹಿಂದೆ ಸಿಮ್ರಾನ್ಳನ್ನು ಮದುವೆಯಾಗಿದ್ದ.
ಮದುವೆಯಾಗಿ ಇಬ್ಬರು ಮಕ್ಕಳಾದರೂ ಪದೇ ಪದೇ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಮದುವೆ ಸಮಯದಲ್ಲೂ ಸಹ 1 ಲಕ್ಷ ವರದಕ್ಷಿಣೆ ಕೊಟ್ಟು ಸಿಮ್ರಾನ್ ತಂದೆ ತಾಯಿ ವಿವಾಹ ಮಾಡಿಕೊಟ್ಟಿದ್ದರು. ನಂತರವೂ ಎರಡು ಮೂರು ಬಾರಿ ಹಣ ಕೊಟ್ಟಿದ್ದಾರೆ. ಇನ್ನೂ ಪದೇ ಪದೇ ಇದೇ ರೀತಿ ವರದಕ್ಷಿಣೆಗಾಗಿ ಅಬ್ದುಲ್ ರಜಾಕ್ ಪೀಡಿಸುತ್ತಿದ್ದು ಎಷ್ಟು ಸಾರಿ ದುಡ್ಡು ತರೋದು ಎಂದು ಸಿಮ್ರಾನ್ ಪ್ರಶ್ನೆ ಮಾಡಿದ್ದಾಳೆ.
ಇದರಿಂದ ಕೆರಳಿದ ಗಂಡ ಅಬ್ದುಲ್ ರಜಾಕ್ ನನಗೆ ಎದುರು ಜವಾಬು ಕೊಡುತ್ತೀಯ ಎಂದು ಮನೆಯಲ್ಲಿ ಕೂಡಿ ಹಾಕಿ ಬೆಲ್ಟ್ ನಿಂದ ಮನಸ್ಸೋ ಇಚ್ಚೆ ಬಾಸುಂಡೆ ಬರುವಂತೆ ಬಾರಿಸಿದ್ದಾನೆ. ಇದರಿಂದ ಸಿಮ್ರಾನ್ ಮೈ ಕೈ ಎಲ್ಲಾ ರಕ್ತ ಹೆಪ್ಪುಗಟ್ಟಿ ಕೆಂಪಾಗಿ ಬಾಸುಂಡೆ ಬಂದಿದೆ. ಸದ್ಯ ಅಸ್ವಸ್ಥಗೊಂಡಿರುವ ಸಿಮ್ರಾನ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.