ನವದೆಹಲಿ: ಚೀನಾ ದೇಶದ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯಾ ತನಿಖಾ ದಳದ(ಸಿಬಿಐ) ಅಧಿಕಾರಿಗಳು ತಮ್ಮ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಕೆಲವು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.
ಈ ಕುರಿತಂತೆ ಲೋಕಸಭೆ ಸ್ಪೀಕರ್ಗೆ ಪತ್ರ ಬರೆದಿರುವ ಅವರು, ದಾಳಿ ನಡೆಸಿದ ವೇಳೆ ಕೆಲವು ಸಿಬಿಐನ ಅಧಿಕಾರಿಗಳು ಮಾಹಿತಿ ಮತ್ತು ತಂತ್ರಜ್ಞಾನಕ್ಕಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಸಂಬಂಧಿಸಿದ ನನ್ನ ಅತ್ಯಂತ ಗೌಪ್ಯ ಮತ್ತು ಸೂಕ್ಷ್ಮ ವೈಯಕ್ತಿಕ ಪುಸ್ತಕಗಳನ್ನು ಮತ್ತು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನಾನು ತೀವ್ರ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಕ್ರಮಕ್ಕೆ ಬಲಿಯಾಗಿದ್ದೇನೆ. ಕೇಂದ್ರೀಯ ತನಿಖಾ ದಳವು, ನಾನು ಭಾಗಿಯಾಗಿಲ್ಲದ ಭಾರತ ಸರ್ಕಾರದ 11 ವರ್ಷಗಳ ಹಿಂದಿನ ನಿರ್ಧಾರಗಳ ಬಗ್ಗೆ ತನಿಖೆ ನಡೆಸುವ ನೆಪದಲ್ಲಿ ದೆಹಲಿಯಲ್ಲಿರುವ ನನ್ನ ನಿವಾಸದ ಮೇಲೆ ದಾಳಿ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ
ಲಂಚ ಪಡೆದ ಆರೋಪದಡಿ ದೆಹಲಿ ಸಿಬಿಐ ಪ್ರಧಾನ ಕಚೇರಿಯಲ್ಲಿ ಕಾರ್ತಿ ಅವರನ್ನು ಸತತ ಎರಡನೇ ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ತಮ್ಮ ಕರಡು ಟಿಪ್ಪಣಿಗಳು ಮತ್ತು ಪ್ರಶ್ನೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಸಿಬಿಐ ಅಧಿಕಾರಿಗಳ ವಿರುದ್ಧ ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.
2011ರಲ್ಲಿ ಪಿ. ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ 263 ಚೀನಾ ದೇಶದ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿದೇಶದಿಂದ ಆಗಮಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರನ್ನು 9 ಗಂಟೆಗಳ ಕಾಲ ಸಿಬಿಐ ಗುರುವಾರ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಟದ್ರವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಮುಖ ಆರೋಪಿ ಅರೆಸ್ಟ್
263 ಚೀನಾದ ಕೆಲಸಗಾರರಿಗೆ ವೀಸಾ ಒದಗಿಸಲು ಪಂಜಾಬ್ ನಲ್ಲಿ ವಿದ್ಯುತ್ ಘಟಕವೊಂದನ್ನು ನಿರ್ಮಿಸಿರುವ ವೇದಾಂತ ಗ್ರೂಪ್ ಕಂಪನಿಯ ಉನ್ನತ ಕಾರ್ಯನಿರ್ವಾಹಕರಿಂದ ಕಾರ್ತಿ ಮತ್ತು ಅವರ ಆಪ್ತ ಎಸ್ ಭಾಸ್ಕರರಮಣ್ ಅವರಿಂದ 50 ಲಕ್ಷ ಲಂಚ ಪಡೆದಿದ್ದಾರೆ ಎಂದು ಸಿಬಿಐ ಎಫ್ಐಆರ್ ನಲ್ಲಿ ದಾಖಲಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಕಾರ್ತಿ ತಳ್ಳಿ ಹಾಕಿದ್ದಾರೆ.