ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಗೂಂಡಾಗಳು ಪುಂಡಾಟಿಕೆ ಮುಂದುವರೆಸಿದ್ದು ಮದುವೆ ಸಮಾರಂಭದಲ್ಲಿ ಕನ್ನಡ ಹಾಡನ್ನು ಹಾಕಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದಾಮಣೆ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಅಧಿವೇಶನದ ವೇಳೆ ಗೂಂಡಾವರ್ತನೆ ತೋರಿದ್ದ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದ ಎಂಇಎಸ್ ಗೂಂಡಾಗಳು ಮತ್ತೆ ಕಿರಕ್ ಮಾಡಿದ್ದಾರೆ. ತಾಲೂಕಿನ ದಾಮಣೆ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರ ಸಿದ್ದು ತಮ್ಮ ಭರಮಾ ಸೇರಿ ಐವರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ವಧು-ವರ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವನಿಗೆ ಗಂಭೀರ ಗಾಯವಾಗಿದ್ದು ಸದ್ಯ ಗಂಭೀರವಾಗಿ ಗಾಯಗೊಂಡ ಓರ್ವನಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಬಟದ್ರವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಮುಖ ಆರೋಪಿ ಅರೆಸ್ಟ್
ಗುರುವಾರ ಬೆಳಗಾವಿ ತಾಲೂಕಿನ ದಾಣಮೆ ಗ್ರಾಮದಲ್ಲಿ ನಿನ್ನೆ ಸೈಬಣ್ಣವರ್ ಅವರ ಮನೆಯಲ್ಲಿ ಮದುವೆ ಸಮಾರಂಭವಿದ್ದ ಹಿನ್ನೆಲೆ ರಾತ್ರಿ ಬ್ಯಾಂಡ್ ಹಚ್ಚಿ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ಮದುವೆ ಸಮಾವೇಶದಲ್ಲಿ ಕನ್ನಡ ಧ್ವಜ ಹಿಡಿದು ‘ಕರುನಾಡೇ’ ಹಾಡಿಗೆ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಆಗ ಎಂಇಎಸ್ ಗೂಂಡಾಗಳಾದ ಅಜಯ್ ಯಳ್ಳೂರಕರ್, ಆಕಾಶ್ ಸೇರಿ ಎಂಟತ್ತು ಯುವಕರ ತಂಡವೊಂದು ಆಗಮಿಸಿ ಕನ್ನಡ ಹಾಡನ್ನು ಹಾಕದಂತೆ ಎಚ್ಚರಿಕೆ ನೀಡಿ ಗಲಾಟೆ ಪ್ರಾರಂಭಿಸಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ ವಿಕೋಪಕ್ಕೆ ಹೋಗಿ ಎಂಇಎಸ್ ಪುಂಡರು ವಧು-ವರ ಸೇರಿ ಆತನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಗೆ ಕುಟುಂಬಸ್ಥರ ದೂರು ನೀಡಿದ್ದಾರೆ. ಇತ್ತ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಈ ಮುನ್ನ ಬೆಳಗಾವಿ ಅಧಿವೇಶನ ವೇಳೆ ಮನೆ ಎದುರಿಗೆ ನಿಂತಿದ್ದ ಬೈಕ್ಗೆ ಎಂಇಎಸ್ ಗೂಂಡಾಗಳು ಬೆಂಕಿ ಹಚ್ಚಿದ್ದರು. ರಾಣಿ ಚನ್ನಮ್ಮ ನಗರ ಅಂತಾ ಕೈಬರಹದ ಬೋರ್ಡ್ ಹಾಕಿದ್ದ ಕನ್ನಡ ಬೋರ್ಡ್ ಎದುರು ಧರ್ಮವೀರ ಸಂಭಾಜಿ ನಗರ ಎಂಬ ಬೋರ್ಡ್ ಹಾಕಿ ಎಂಇಎಸ್ ಗೂಂಡಾಗಳು ಕ್ರೌರ್ಯ ಮೆರೆದಿದ್ದರು. ಈ ಬಗ್ಗೆ ಪೊಲೀಸರು ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.