ಬೆಂಗಳೂರು: ಶಿವಮೊಗ್ಗದ ಹುಣಸೋಡು ಮತ್ತು ಚಿಕ್ಕಬಳ್ಳಾಪುರದ ಗುಡಿಬಂಡೆ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸ್ಫೋಟ ಸಂಭವಿಸಿದೆ. ಕನಕಪುರ ತಾಲೂಕಿನ ಸಂಗಮ ರಸ್ತೆಯ ಮರಳೇಗವಿ ಮಠದ ಕಲ್ಲು ಕ್ವಾರಿ ಬಳಿ ಕಾರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಛಿದ್ರ ಛಿದ್ರವಾಗಿ ಸಾವನ್ನಪ್ಪಿದಾನೆ. ಆದರೆ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಅಲ್ಲಿನ ಎಸ್ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.
ಕನಕಪುರದ ಮಹೇಶ್ ಎಂಬವರು ಸಾವನ್ನಪ್ಪಿರುವ ದುರ್ದೈವಿ. ಮರಳೇಗವಿ ಮಠದ ಕ್ವಾರಿಯಲ್ಲಿ ಮಹೇಶ್ ಅವರು ಕ್ವಾರಿಗೆ ಕಬ್ಬಿಣದ, ಸಲಕರಣೆಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿದ್ದರು. ಯಾವ ಕಾರಣಕ್ಕೆ ಕಾರು ಸ್ಫೋಟವಾಗಿದೆ ಅನ್ನೋದು ಗೊತ್ತಾಗಿಲ್ಲ. ಆದರೆ ಮಠದ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಎಸ್ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಬೂಲ್ನಿಂದ ಭಾರತೀಯರ ಕರೆತರಲು ಕಸರತ್ತು
ಕ್ವಾರಿಯಲ್ಲಿ ಕಲ್ಲು ಕಟ್ ಮಾಡುವ ಕೆಲಸ ಮಾಡಲಾಗುತ್ತಿದೆ. ಕಲ್ಲು ಕಟ್ ಮಾಡಲು ಜಿಲೆಟಿನ್ ಬೇಕಾಗಿಲ್ಲ. ಕ್ವಾರಿಯಿಂದ ಎರಡು ಕಿಮೀ ದೂರದಲ್ಲಿ ಕಾರು ಸ್ಫೋಟವಾಗಿದೆ. ಕ್ವಾರಿಯಿಂದ ವಾಪಸ್ ಎರಡು ಕಿಮೀ ದೂರದವರೆಗೆ ಮಹೇಶ್ ಕಾರನ್ನು ಓಡಿಸಿಕೊಂಡು ಹೋಗಿದ್ದಾರೆ, ಆ ಬಳಿಕ ಕಾರು ಸ್ಫೋಟವಾಗಿದ್ದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಫೋಟದ ರಭಸಕ್ಕೆ ಮಹೇಶ್ ಅವರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ಯಾಡ್ ಕರೆಸಿ ಪರಿಶೀಲನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಅವರ ತನಿಖೆಯ ಬಳಿಕ ಸ್ಫೋಟದ ಕಾರಣ ತಿಳಿಯಲಿದೆ.ಈ ನಡುವೆ ಕಾರ್ ನಲ್ಲಿ ಜಿಲೆಟಿನ್ ಇತ್ತಾ, ಇಲ್ವಾ ಅನ್ನೋದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್