ರಾಯಚೂರು: ಜಿಲ್ಲೆಯಲ್ಲಿ ನಾಟಿ ವೈದ್ಯನೊಬ್ಬನ ಎಡವಟ್ಟಿನಿಂದ ಎಂಟು ವರ್ಷದ ಬಾಲಕನೋರ್ವ ತನ್ನ ಕೈಯನ್ನೇ ಕಳೆದುಕೊಂಡಿದ್ದಾನೆ.
ಲಿಂಗಸುಗೂರಿನ ಗುರುಶಾಂತಪ್ಪ ಎಂಬವರ ಮಗ ಆದರ್ಶ ಆಟವಾಡುತ್ತಿದ್ದಾಗ ಬಿದ್ದು ತನ್ನ ಬಲಗೈ ಮುರಿದುಕೊಂಡಿದ್ದನು. ಕೂಡಲೇ ಆತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ದೇವದುರ್ಗದ ಚಿಂಚೋಡಿಯ ನಾಟಿವೈದ್ಯ ಪರಮಣ್ಣ ಬನಗಂಡಿ ಎಂಬವನಿಗೆ ತೋರಿಸಿದ್ದಾರೆ.
ಪರಮಣ್ಣ ಕೈಗೆ ಪಟ್ಟಿಯೊಂದನ್ನು ಕಟ್ಟಿ ಕಳುಹಿಸಿದ್ದಾನೆ. ನೋವು ಕಂಡರೂ ಪಟ್ಟಿ ಬಿಚ್ಚದಂತೆ ಸೂಚಿಸಿದ್ದರಿಂದ ಪೋಷಕರು ಸುಮ್ಮನಾಗಿದ್ದರು. ಇಪ್ಪತ್ತು ದಿನಗಳ ಬಳಿಕ ನೋವು ತೀವ್ರಗೊಂಡಾಗ ಪುನಃ ತಾಲೂಕಾಸ್ಪತ್ರೆಗೆ ಕೈರೆದ್ಯೊಯ್ದಿದ್ದಾರೆ. ಕೈ ಕೊಳೆತಿದ್ದರಿಂದ ಹೆಚ್ವಿನ ಚಿಕಿತ್ಸೆಗೆ ಉತ್ತಮ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮೀರಜ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಅನಿವಾರ್ಯವಾಗಿ ಪೋಷಕರ ಒಪ್ಪಿಗೆ ಮೇರೆಗೆ ಆದರ್ಶನ ಬಲಗೈ ಕತ್ತರಿಸಿದ್ದಾರೆ. ನಾಟಿ ವೈದ್ಯ ಪರಮಣ್ಣನ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗನಿಗಾದ ಅನ್ಯಾಯಕ್ಕೆ ನ್ಯಾಯಕೊಡಿ ಅಂತ ಪೋಷಕರು ಅಂಗಲಾಚುತ್ತಿದ್ದಾರೆ.