ಚೆನ್ನೈ: ಪ್ರೇಯಸಿಯ ನಿಧನದಿಂದ ಖಿನ್ನತೆಗೊಳಗಾಗಿ ಪ್ರಿಯಕರನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿದ ಕಡಲೂರು ಜಿಲ್ಲೆಯ ಪರಮೇಶ್ವಾನಲ್ಲೂರ್ ನಲ್ಲಿ ನಡೆದಿದೆ.
ವಿತೀಶ್ವರನ್ (22) ಆತ್ಮಹತ್ಯೆಗೆ ಶರಣಾದ ಪ್ರಿಯತಮ. ಈತ ಬಾಲ್ಯದಲ್ಲಿರುವಾಗಲೇ ತನ್ನ ಪೋಷಕರನ್ನು ಕಳೆದುಕೊಂಡಿದ್ದು, ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸಿಸುತ್ತಿದ್ದನು. ವಿತೀಶ್ವರನ್ ವಿದ್ಯಾಭ್ಯಾಸ ಮುಗಿದ ಬಳಿಕ ಬೇರೆ ರಾಜ್ಯಕ್ಕೆ ಕೆಲಸಕ್ಕಾಗಿ ಹೋಗಿದ್ದನು. ಅಲ್ಲಿಂದ ಕೆಲವು ತಿಂಗಳ ನಂತರ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದನು.
ತಮ್ಮ ಗ್ರಾಮಕ್ಕೆ ಬಂದ ನಂತರ ರಥಿನಾ ಪ್ರಿಯಾ (21) ಎಂಬ ಹುಡುಗಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಪ್ರಿಯಾ, ವಿತೀಶ್ವರನ್ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಾಗ ಅದನ್ನು ಆಕೆಯ ತಾಯಿ ನೋಡಿದ್ದಾರೆ. ಬಳಿಕ ಪ್ರಿಯಾಗೆ ಬೈದು, ಇನ್ನು ಮುಂದೆ ಆತನನ್ನು ಭೇಟಿಯಾಗಬಾರದು ಎಂದು ಎಚ್ಚರಿಸಿದ್ದಾರೆ.
ಇದರಿಂದ ಖಿನ್ನತೆಗೆ ಒಳಗಾದ ಪ್ರಿಯಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ವಿತೀಶ್ವರನ್ಗೆ ತಿಳಿದಿದ್ದು, ಸೋಮವಾರ ತನ್ನ ಪ್ರೇಯಸಿಯ ಅಂತಿಮ ಕಾರ್ಯದಲ್ಲಿ ಭಾಗಿಯಾಗಿ ಬಳಿಕ ಮನೆಗೆ ಹಿಂದಿರುಗಿದ್ದಾನೆ. ಆದರೆ ತನ್ನ ಪ್ರೇಯಸಿಯ ಅಗಲಿಕೆಯನ್ನು ಸಹಿಸಲಾಗದೇ ಅಂದು ರಾತ್ರಿಯೇ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದರು. ನಂತರ ಮಂಗಳವಾರ ಪೊಲೀಸರು ಆತನ ಸ್ನೇಹಿತರಿಗೆ, ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಂಬಂಧಿಕರ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv